ಕೋಲ್ಕತ್ತ: ಪುನರ್ಬಳಕೆ ಕುರಿತಂತೆ ಜನರಲ್ಲಿ ಅರಿವು ಮೂಡಿಸುವ ದೃಷ್ಟಿಯಿಂದ ಕೋಲ್ಕತ್ತದ ಕಲಾವಿದರೊಬ್ಬರು ಬಳಸಿ ಬಿಸಾಡಲಾದ ವಸ್ತುಗಳಿಂದ ದುರ್ಗಾ ಮಾತೆಯ ಮೂರ್ತಿ ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.
ಹಳೆಯ ಬಟ್ಟೆ, ಹರಿದ ಶೂಗಳು, ಧೂಳು ಹಿಡಿದ ಮರದ ಸಾಮಾಗ್ರಿ, ಮುರಿದ ಹೂದಾನಿ, ಹಳೆಯ ಸುದ್ದಿಪತ್ರಿಕೆಗಳನ್ನು ಬಳಸಿ ದುರ್ಗಾ ಮೂರ್ತಿಯನ್ನು ರಚಿಸಲಾಗಿದೆ. ಸಾಲ್ಟ್ ಲೇಕ್ ಪ್ರದೇಶದ ಸಿಟಿ ಸೆಂಟರ್ 1 ಮಾಲ್ನಲ್ಲಿ ಮೂರ್ತಿಯನ್ನು ಇರಿಸಲಾಗುತ್ತದೆ.
ಕೋಲ್ಕತ್ತದ ವಿವಿಧೆಡೆ ಎಸೆಯಲಾಗಿದ್ದ ವಸ್ತುಗಳನ್ನು ಕಳೆದ ಒಂದು ತಿಂಗಳಿಂದ ಸಂಗ್ರಹಿಸಲಾಗಿದೆ ಎಂದು ಕಲಾವಿದ ಅರಿಜಿತ್ ಘಟಕ್ ಹೇಳಿದ್ದಾರೆ.
ಕಲಾವಿದನ ಕೈಚಳದಲ್ಲಿ ಮೂಡಿಬಂದಿರುವ ದುರ್ಗಾ ಮಾತೆಯ ಮೂರ್ತಿಯನ್ನು ನೋಡಲು ಬರುತ್ತಿರುವ ಜನರು, ಬಳಸಿ ಬಿಸಾಡಲಾದ ವಸ್ತುಗಳಿಂದ ಇದನ್ನು ತಯಾರಿಸಲಾಗಿದೆ ಎಂಬುದನ್ನು ನಂಬಲು ಸಿದ್ಧರಿಲ್ಲ ಎಂದು ಸ್ಥಳೀಯ ಎಫ್ಎಂ ಚಾನಲ್ ವರದಿ ಮಾಡಿದೆ.
ನವರಾತ್ರಿ ಪೂಜೆಗೂ ಒಂದು ಚಿಕ್ಕ ಮೂರ್ತಿ ತಯಾರಿಸಿ ಕೊಡುವುದಾಗಿ ಕಲಾವಿದರು ಹೇಳುತ್ತಾರೆ.
ಕೋಲ್ಕತ್ತ ನಗರವನ್ನು ಗ್ರೀನ್ ಸಿಟಿಯನ್ನಾಗಿಸುವುದು ನಗರದ ಎಲ್ಲ ಜನರ ಜವಾಬ್ದಾರಿ ಎಂದು ಗ್ರೀನ್ ಸಿಟಿ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ನಟಿ ರಿತುಪರ್ಣ ಸೇನ್ಗುಪ್ತಾ ಹೇಳಿದ್ದಾರೆ.
‘ಭವಿಷ್ಯದ ಪೀಳಿಗೆಗಾಗಿ ನಗರವನ್ನು ಗ್ರೀನ್ ಸಿಟಿಯಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಕುರಿತು ಜಾಗೃತಿ ಮೂಡಿಸಬೇಕಿದೆ. ಈ ಕುರಿತು ಅರಿವು ಮೂಡಿಸಲು ಸಂಪೂರ್ಣ ನಗರ ಸಂತಸದಿಂದ ಕೂಡಿರುವ ದುರ್ಗಾ ಪೂಜೆಯ ಸಮಯವಲ್ಲದೆ ಬೇರಾವ ಸಮಯ ಉತ್ತಮವಾದದ್ದು ಹೇಳಿ’ ಎಂದು ಅವರು ಹೇಳಿದ್ದಾರೆ.
ಫೈಬರ್ ಮತ್ತು ಅಷ್ಟಧಾತುವಿನಿಂದ ತಯಾರಿಸಲಾದ 11 ಅಡಿಯ ಮೂರ್ತಿಯನ್ನೂ ಸಹ ಉತ್ತರ ಕೋಲ್ಕತ್ತದಲ್ಲಿ ಇಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.