ರಾಂಚಿ/ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ₹31 ಕೋಟಿಗೂ ಹೆಚ್ಚು ಮೌಲ್ಯದ 8.86 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು ಎಂದು ಸಮರ್ಥಿಸಿಕೊಳ್ಳಲು ಜಾರಿ ನಿರ್ದೇಶನಾಲಯ (ಇ.ಡಿ) ಬಳಸಿದ ಸಾಕ್ಷ್ಯಾಧಾರಗಳಲ್ಲಿ ರೆಫ್ರಿಜರೇಟರ್, ಸ್ಮಾರ್ಟ್ ಟಿ.ವಿಯ ಇನ್ವಾಯ್ಸ್ ಸೇರಿವೆ ಎಂದು ತಿಳಿದು ಬಂದಿದೆ.
ಈ ಎರಡು ಬಿಲ್ಗಳನ್ನು ರಾಂಚಿ ಮೂಲಕ ಇಬ್ಬರು ಡೀಲರ್ಗಳಿಂದ ಇ.ಡಿ ಕಲೆ ಹಾಕಿದ್ದು, ಇದನ್ನು ಸೊರೇನ್ ವಿರುದ್ಧ ಸಲ್ಲಿಸಲಾಗಿದ್ದ ಚಾರ್ಜ್ ಶೀಟ್ನಲ್ಲಿ ಲಗತ್ತಿಸಿದೆ.
191 ಪುಟಗಳ ಚಾರ್ಜ್ ಶೀಟ್ನಲ್ಲಿ ಸೊರೇನ್, ರಾಜ್ಕುಮಾರ್ ಪಹಾನ್, ಹಿಲರಿಯಾಸ್, ಭಾನು ಪ್ರತಾಪ್ ಪ್ರಸಾದ್ ಮತ್ತು ಬಿನೋದ್ ಸಿಂಗ್ ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
48 ವರ್ಷದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಸೂರೇನ್ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ರಾಂಚಿಯ ವಿಶೇಷ ನ್ಯಾಯಾಯಲದಲ್ಲಿ ಇ.ಡಿ ಚಾರ್ಜ್ ಶೀಟ್ ಸಲ್ಲಿಸಿತ್ತು.
ಭೂಹಗರಣ ಪ್ರಕರಣ ಸಂಬಂಧ ಜನವರಿ 3ರಂದು ಸೊರೇನ್ ಅವರನ್ನು ಇ.ಡಿ ಬಂಧಿಸಿತ್ತು. ಬಂಧನಕ್ಕೂ ಮುನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದು, ರಾಂಚಿಯ ಹೊತ್ವಾರ್ನಲ್ಲಿರುವ ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹದಲ್ಲಿದ್ದಾರೆ.