ನವದೆಹಲಿ: ಇಂಡಿಯನ್ ಎಕ್ಸಾಮಿನೇಷನ್ಸ್ ಕೌನ್ಸಿಲ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಸಾಕ್ಷಿ ಪ್ರದ್ಯುಮ್ನನಿಗೆ ಆತ್ಮವಿಶ್ವಾಸ ತುಂಬಿದ್ದು ಮೋದಿಯವರ ಎಕ್ಸಾಂ ವಾರಿಯರ್! ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಎಕ್ಸಾಂ ವಾರಿಯರ್ ಯಾವ ರೀತಿ ಸಹಾಯ ಮಾಡಿತು ಎಂಬುದರ ಬಗ್ಗೆ ಪ್ರದ್ಯುಮ್ನ ಜುಲೈ 6 ರಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದನು.
ಪತ್ರದಲ್ಲಿ ಏನಿದೆ?
12 ನೇ ತರಗತಿಯ ಬೋರ್ಡ್ ಎಕ್ಸಾಂ ಶುರುವಾಗುವ ಹೊತ್ತಿಗೆ ಎಕ್ಸಾಂ ವಾರಿಯರ್ ಎಂಬ ಗಿಫ್ಟ್ ನನಗೆ ಸಿಕ್ಕಿತು.ಆ ಪುಸ್ತಕ ಅಮೂಲ್ಯವಾದದ್ದು. ಅದು ಕಲಿಕೆಯಲ್ಲಿ ಗಮನ ಕೇಂದ್ರೀಕರಿಸಲು ಸಹಾಯ ಮಾಡಿದ್ದಲ್ಲದೆ ಮಾನಸಿಕ ಒತ್ತಡವನ್ನು ನಿವಾರಿಸಿ ನನ್ನಲ್ಲಿ ಆತ್ಮ ವಿಶ್ವಾಸ ತುಂಬಲು ಸಹಾಯ ಮಾಡಿತು.ಬೋರ್ಡ್ ಪರೀಕ್ಷೆ ಮತ್ತು ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಾಗ ಮಾನಸಿಕ ಒತ್ತಡವಿಲ್ಲದೆ ನಿರಾಳವಾಗುವಂತೆ ಮಾಡಿತು.
ಸಮಯದ ಸದುಪಯೋಗ, ಪ್ರಸ್ತುತಿ, ಸಾಮರ್ಥ್ಯ, ವ್ಯಕ್ತಿತ್ವ, ಸ್ವ ಸಾಮರ್ಥ್ಯವನ್ನು ಅರಿತುಕೊಳ್ಳುವ ಬಗೆ ಎಲ್ಲವೂ ನನಗೆ ಚೈತನ್ಯವನ್ನು ತುಂಬಿ ಆಶಾವಾದದಿಂದಿರುವಂತೆ ಮಾಡಿದೆ. ಇದೆಲ್ಲವೂ ನನ್ನನ್ನು ಉನ್ನತ ಮಟ್ಟಕ್ಕೇರುವಂತೆ ಮಾಡಿತು.
ಪ್ರದ್ಯುಮ್ನನ ಪತ್ರಕ್ಕೆ ಮೋದಿ ಟ್ವೀಟ್ ಪ್ರತಿಕ್ರಿಯೆ
ಪ್ರದ್ಯುಮ್ನನ ಪತ್ರವನ್ನೋದಿದ ಮೋದಿ ಬುಧವಾರ ಈ ಬಗ್ಗೆ ಟ್ವೀಟ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಅದ್ಭುತವಾದ ಪತ್ರಕ್ಕೆ ಧನ್ಯವಾದಗಳು ಸಾಕ್ಷಿ. ಪರೀಕ್ಷಾ ತಯಾರಿ ವೇಳೆ ಎಕ್ಸಾಂ ವಾರಿಯರ್ಸ್ ನಿನಗೆ ಸಹಾಯ ಮಾಡಿತು ಎಂಬುದನ್ನು ತಿಳಿದು ಖುಷಿಯಾಯಿತು. ಶುಭ ಹಾರೈಕೆಗಳು ಎಂದು ಮೋದಿ ಟ್ವೀಟಿಸಿದ್ದಾರೆ.
Thank you Sakshi for this wonderful letter. I am glad that #ExamWarriors helped you during your exam preparations. My best wishes. pic.twitter.com/9M9C5gNBE8
— Narendra Modi (@narendramodi) July 18, 2018
ಪ್ರಧಾನಿ ಟ್ವೀಟ್ನಿಂದ ಖುಷಿಯಾಗಿದೆ
ನನ್ನ ಪತ್ರಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದು ನೋಡಿ ಖುಷಿಯಾಗಿದೆ. ನನ್ನಲ್ಲಿ ಆತ್ಮ ವಿಶ್ವಾಸ ತುಂಬಲು ಸಹಾಯ ಮಾಡಿದ ಎಕ್ಸಾಂ ವಾರಿಯರ್ ಪುಸ್ತಕಕ್ಕೆಋಣಿ.ಮೋದಿಯವರಿಗೆ ಪತ್ರ ಬರೆಯುವಂತೆ ನನ್ನ ಅಪ್ಪ ಹೇಳಿದ್ದರು, ನಿಜವಾಗಿಯೂ ಆ ಪುಸ್ತಕ ನನ್ನ ಯಶಸ್ವಿಗೆ ಕಾರಣವಾಯಿತು ಎಂದು 18ರ ಹರೆಯದ ಸಾಕ್ಷಿ ಪ್ರದ್ಯುಮ್ನ ಪ್ರತಿಕ್ರಿಯಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.
ಶೇ.99.5 ಅಂಕ ಪಡೆದು ಪ್ರದ್ಯುಮ್ನ ಐಎಸ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನಗಳಿಸಿದ್ದಾನೆ. ಈತ ಗಣಿತ, ಫಿಸಿಕ್ಸ್, ಕೆಮಿಸ್ಚ್ರಿ, ಕಂಪ್ಯೂಟರ್ ಸಯನ್ಸ್ ನಲ್ಲಿ ನೂರಕ್ಕೆ ನೂರು ಅಂಕ, ಹಿಂದಿಯಲ್ಲಿ 99 ಮತ್ತು ಇಂಗ್ಲಿಷ್ನಲ್ಲಿ 98 ಅಂಕ ಗಳಿಸಿದ್ದಾನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.