ಹರಿಯಾಣ: ಪಂಜಾಬ್– ಹರಿಯಾಣ ಗಡಿಯಲ್ಲಿ ರೈತರ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ಭಾಗಿಯಾದ ಮತ್ತು ಆಸ್ತಿಪಾಸ್ತಿ ಹಾನಿ ಮಾಡಿದವರ ವೀಸಾ ಮತ್ತು ಪಾಸ್ಪೋರ್ಟ್ಗಳನ್ನು ರದ್ದುಗೊಳಿಸಲು ಹರಿಯಾಣ ಪೊಲೀಸರು ನಿರ್ಧರಿಸಿದ್ದಾರೆ.
ಈ ಕುರಿತು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಡಿಎಸ್ಪಿ ಅಂಬಾಲಾ ಜೋಗಿಂದರ್ ಶರ್ಮಾ ಅವರು, ‘ಪಂಜಾಬ್ನಿಂದ ಹರಿಯಾಣಕ್ಕೆ ಬಂದು ಹಿಂಸಾಚಾರದಲ್ಲಿ ಭಾಗಿಯಾದವರನ್ನು ಸಿಸಿಟಿವಿ ಮತ್ತು ಡ್ರೋನ್ ಕ್ಯಾಮೆರಾಗಳ ಮೂಲಕ ಗುರುತಿಸಲಾಗಿದ್ದು, ಅವರ ಹೆಸರನ್ನೂ ಪತ್ತೆ ಮಾಡಲಾಗಿದೆ. ಹಿಂಸಾಚಾರದಲ್ಲಿ ಭಾಗಿಯಾದವರ ಹೆಸರು, ಫೋಟೊ ಮತ್ತು ವಿಳಾಸವನ್ನು ಪಾಸ್ಪೋರ್ಟ್ ಕಚೇರಿಗೆ ತಲುಪಿಸಲಾಗುವುದು. ಅವರ ವೀಸಾ ಮತ್ತು ಪಾಸ್ಪೋರ್ಟ್ಗಳನ್ನು ರದ್ದುಗೊಳಿಸುವಂತೆ ಸಚಿವಾಲಯ ಮತ್ತು ರಾಯಭಾರ ಕಚೇರಿಯನ್ನು ಕೋರಲಾಗುವುದು. ನಾವೂ ಅವರ ಪಾಸ್ಪೋರ್ಟ್ ರದ್ದತಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಹರಿಯಾಣದ ಖನೌರಿ ಗಡಿ ಬಳಿ ಭದ್ರತಾ ಸಿಬ್ಬಂದಿ ಮತ್ತು ರೈತರ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ರೈತನ ಸಾವಿನ ಪ್ರಕರಣವನ್ನು ಪಂಜಾಬ್ ಪೊಲೀಸರು ಕೊಲೆ ಎಂದು ಪ್ರಕರಣ ದಾಖಲಿಸಿದ್ದಾರೆ.