ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪರವಾಡ ಬಳಿ ಇರುವ ಜೆ.ಎನ್ ಫಾರ್ಮಾ ಸಿಟಿಯಲ್ಲಿರುವ ಔಷಧ ತಯಾರಕ ಘಟಕದಲ್ಲಿ ಸೋಮವಾರ ಬೃಹತ್ ಸ್ಫೋಟ ಸಂಭವಿಸಿದ್ದು, ಕಾರ್ಮಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಕಾರ್ಮಿಕನನ್ನು ಗಜುವಾಕಾದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ ವಿನಯ್ ಚಂದ್ ಹೇಳಿದ್ದಾರೆ. ಸ್ಫೋಟ ಸಂಭವಿಸಿದಾಗ ಘಟಕದಲ್ಲೇ ಇದ್ದ ಇತರ ಮೂವರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ ಎನ್ನಲಾಗಿದೆ.
Andhra Pradesh: A fire has broken out at a pharma company in JN pharma city, Visakhapatnam. Fire tenders at the spot. No casualties reported. pic.twitter.com/Q9LvTbh6uJ
— ANI (@ANI) July 13, 2020
ಕೆಲ ತಿಂಗಳ ಹಿಂದೆ ಎಲ್ಜಿ ಪಾಲಿಮರ್ಸ್ ಕೈಗಾರಿಕೆಯಿಂದ ವಿಷಾನಿಲ ಸೋರಿಕೆಯಾಗಿ ಹಲವರು ಮೃತಪಟ್ಟ ಘಟನೆ ಹಸಿರಾಗಿರುವಾಗಲೇ ನಡದಿರುವ ಘಟನೆಯು ಪರವಾಡಾ ಪ್ರದೇಶದ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ.
ಕೈಗಾರಿಕೆಯಲ್ಲಿ ಮೊದಲು ಸ್ಫೋಟ ಸಂಭವಿಸಿದೆ, ಅದರ ನಂತರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಸಾಗರ ತ್ಯಾಜ್ಯ ನಿರ್ವಹಣೆ ಮಾಡಲಾಗುವ ರಾಮ್ಕಿ ದ್ರಾವಕಗಳ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂದು ಮೂಗಳು ತಿಳಿಸಿವೆ.
ಭಾರಿ ಪ್ರಮಾಣದ ಬೆಂಕಿಯನ್ನು ನಂದಿಸಲು ಮತ್ತು ಸುತ್ತಮುತ್ತಲಿನ ಇತರ ಔಷಧ ಕಾರ್ಖಾನೆಗಳಿಗೆ ಬೆಂಕಿ ಹರಡದಂತೆ ತಡೆಯಲು ಕನಿಷ್ಠ ಒಂಬತ್ತು ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ ವಿನಯ್ ಚಂದ್ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಎಂ.ಗೌತಮ್ ರೆಡ್ಡಿ ವಿಶಾಖಪಟ್ಟಣಂ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಇತರ ಘಟಕಗಳಲ್ಲಿ ರಾತ್ರಿ ಪಾಳಿಯಲ್ಲಿದ್ದ ಕಾರ್ಮಿಕರನ್ನು ಮೊದಲು ಸ್ಥಳಾಂತರಿಸುವಂತೆ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.
ಪೊಲೀಸರು, ಅಗ್ನಿಶಾಮಕ ಸೇವೆಗಳು ಮತ್ತು ಆರೋಗ್ಯ ಅಧಿಕಾರಿಗಳು ಕಟ್ಟೆಚ್ಚರದಿಂದ ಇರುವಂತೆ ಮತ್ತು ಯಾವುದೇ ಪ್ರಾಣಹಾನಿ ಸಂಭವಿಸದಂತೆ ನೋಡಿಕೊಳ್ಳುವಂತೆ ರೆಡ್ಡಿ ಸೂಚನೆ ನೀಡಿದ್ದಾರೆ.
ಎಲ್ಜಿ ಪಾಲಿಮರ್ಸ್ ದುರಂತವಲ್ಲದೇ, ಕಳೆದ ತಿಂಗಳು ಔಷಧ ತಯಾರಕ ಘಟಕವೊಂದರಲ್ಲಿ ವಿಷಾನಿಲ ಸೋರಿಕೆ ಸಂಭವಿಸಿತ್ತು. ಈ ಘಟನೆಯಲ್ಲಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದರು ಮತ್ತು ನಾಲ್ವರು ಗಾಯಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.