ನವದೆಹಲಿ: ಬೆಂಗಳೂರು –ಹೌರಾ ಎಕ್ಸ್ಪ್ರೆಸ್ ರೈಲು ಅಪಘಾತಕ್ಕೀಡಾದ ಮಾರ್ಗದಲ್ಲಿಯೇ ಭಾನುವಾರ ರಾತ್ರಿ 10.40ಗಂಟೆಗೆ ವಿಶಾಖಪಟ್ಟಣದ ಬಂದರಿನಿಂದ ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲು ರೂರ್ಕೆಲಾ ಸ್ಟೀಲ್ ಪ್ಲಾಟ್ನತ್ತ ಸಂಚರಿಸಿತು.
ತ್ರಿವಳಿ ರೈಲು ಅಪಘಾತ ಸಂಭವಿಸಿದ 51 ಗಂಟೆಗಳ ಬಳಿಕ ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ರೈಲು ಇದಾಗಿದೆ. ನಿಧಾನವಾಗಿ ಸಂಚರಿಸಿದ ರೈಲನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಪತ್ರಕರ್ತರು ಹಾಗೂ ರೈಲ್ವೆ ಅಧಿಕಾರಿಗಳು ವೀಕ್ಷಿಸಿದರು.
‘ರೈಲ್ವೆ ಮಾರ್ಗದ ದುರಸ್ತಿ ಕಾರ್ಯ ಪೂರ್ಣಗೊಂಡ ಬಳಿಕ ಮೊದಲ ಸಂಚಾರ ಆರಂಭಗೊಂಡಿದೆ’ ಎಂದು ರೈಲ್ವೆ ಸಚಿವರು ಟ್ವೀಟ್ ಮಾಡಿದ್ದಾರೆ.