ಜೈಪುರ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಶುಕ್ರವಾರ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿರುವ ಫ್ರಾನ್ಸ್ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ಇಂದು (ಗುರುವಾರ) ಜೈಪುರಕ್ಕೆ ಬಂದಿಳಿದಿದ್ದಾರೆ.
ಅವರನ್ನು ರಾಜಸ್ಥಾನದ ರಾಜ್ಯಪಾಲ ಕಾಲ್ರಾಜ್ ಮಿಶ್ರಾ ಹಾಗೂ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಬರಮಾಡಿಕೊಂಡರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಬುಲಂದ್ಶಹರ್ ಪ್ರವಾಸದಲ್ಲಿದ್ದು, ಸಂಜೆ ಹೊತ್ತಿಗೆ ಜೈಪುರ ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಭಯ ನಾಯಕರು ಅಂಬೇರ್ ಕೋಟೆ, ಜಂತರ್ ಮಂತರ್, ಹವಾ ಮಹಲ್ಗೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ಜಂತರ್ ಮಂತರ್ನಿಂದ ಹವಾ ಮಹಲ್ವರೆಗೆ ರೋಡ್ ಶೋ ನಡೆಸಲಿದ್ದಾರೆ. ನಂತರ ರಾಮ್ಬಾಗ್ ಅರಮನೆ ಹೋಟೆಲ್ನಲ್ಲಿ ಸಭೆ ನಡೆಯಲಿದೆ ಎಂದು ಪಿಟಿಐ ವರದಿ ಮಾಡಿದೆ.
ಭಾರತ ಪ್ರವಾಸ ಕೈಗೊಂಡಿರುವ ಫ್ರಾನ್ಸ್ ನಾಯಕರು ಜೈಪುರದಲ್ಲಿರುವ ಕೆಲ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಶಾಪಿಂಗ್ ನಡೆಸಲಿದ್ದಾರೆ. ಸಾಹು ಚಹಾ ಅಂಗಡಿಯಲ್ಲಿ ಮಸಾಲಾ ಚಹಾ ಸೇವಿಸಲಿದ್ದಾರೆ. ಇದಕ್ಕೆ ಯುಪಿಐ ಬಳಸಿ ಹಣ ಪಾವತಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.