ಸಿಲಿಗುರಿ (ಪಶ್ಚಿಮ ಬಂಗಾಳ): ಹಿಮಾಲಯ ಮತ್ತು ಗಂಗಾ ನದಿ ಪ್ರದೇಶದಲ್ಲಿ ಎರಡು ಸಾಹಸ ಪ್ರವಾಸೋದ್ಯಮ ತಾಣಗಳನ್ನು (ಟ್ರೇಲ್) ತೆರೆಯಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಭಾನುವಾರ ತಿಳಿಸಿದರು.
ಜಿ20ಯ ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಈ ವರ್ಷವೇ ಈ ಎರಡು ತಾಣಗಳನ್ನು ಪ್ರವಾಸಿಗರಿಗಾಗಿ ತೆರೆಯಲಾಗುವುದು. ಅದಕ್ಕಾಗಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೆಗಳ ಜೊತೆಗೂಡಿ ಕೆಲಸ ಮಾಡಲಿದೆ ಎಂದರು.
ಈ ಎರಡು ಟ್ರೇಲ್ಗಳನ್ನು ಮೊದಲಿಗೆ ತೆರೆಯಲಾಗುವುದು. ಮುಂದಿನ ದಿನಗಳಲ್ಲಿ ಇತರ ಕಡೆಗಳಲ್ಲೂ ಟ್ರೇಲ್ಗಳನ್ನು ಆರಂಭಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಅಮರಕಂಟಕದಿಂದ ಅರಬ್ಬೀ ಸಮುದ್ರದವರೆಗೆ ನರ್ಮದಾ ಟ್ರೇಲ್. ಕಾವೇರಿ ನದಿ ಟ್ರೇಲ್, ಕಚ್ನಿಂದ ಕನ್ಯಾಕುಮಾರಿವರೆಗೆ ಪಶ್ಚಿಮ ಕರಾವಳಿ ಟ್ರೇಲ್ ಮತ್ತು ಪಶ್ಚಿಮ ಬಂಗಾಳದಿಂದ ಕನ್ಯಾಕುಮಾರಿವರೆಗೆ ಪೂರ್ವ ಕರಾವಳಿ ಟ್ರೇಲ್ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.