ನವದೆಹಲಿ: ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರ, ‘ದಕ್ಷಿಣಕ್ಕೆ ಪ್ರತ್ಯೇಕ ರಾಷ್ಟ್ರ ಬೇಡಿಕೆ’ ಎಂಬ ಹೇಳಿಕೆ ಇಂದು ರಾಜ್ಯಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು.
ಡಿ.ಕೆ.ಸುರೇಶ್ ಹೆಸರು ಹೇಳದೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿ ಮಾತನಾಡಿದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು, ಕಾಂಗ್ರೆಸ್ನಲ್ಲಿ ವಿಭಜಕ ಶಕ್ತಿಗಳು ಇನ್ನೂ ಜೀವಂತವಾಗಿವೆ ಎನ್ನುವುದಕ್ಕೆ ಈ ಹೇಳಿಕೆ ನಿದರ್ಶನ ಎಂದರು.
ದೇಶದ ಸಂವಿಧಾನದ ಅಡಿ ಚುನಾಯಿತನಾದ ಒಬ್ಬ ಸಂಸದ ದೇಶದ ಸಾರ್ವಭೌಮತೆಯನ್ನು ರಕ್ಷಿಸುತ್ತೇನೆ ಎಂದು ಎಲ್ಲರ ಎದುರು ಪ್ರಮಾಣವಚನ ಸ್ವೀಕರಿಸಿರುತ್ತಾರೆ. ಇಂತಹ ಹೇಳಿಕೆಗಳನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಇದು ಸಂವಿಧಾನದ ಮೇಲಿನ ನೇರ ದಾಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಮಧ್ಯಪ್ರವೇಶಿಸಿದ ಸಭಾಪತಿ ಜಗದೀಪ್ ಧನಕರ್ ಅವರು, ಇದು ಲೋಕಸಭೆ ಸದಸ್ಯ ಮಾತನಾಡಿರುವ ವಿಷಯ ಆಗಿರುವುದರಿಂದ ಇಲ್ಲಿ ಚರ್ಚೆ ಬೇಡ ಎಂದು ತಡೆ ನೀಡಿದರು.