ನವದೆಹಲಿ: ಸಂಚಾರ ದಟ್ಟಣೆ ನಿವಾರಣೆಗಾಗಿ ನವದೆಹಲಿಯ ಸುನೆಹ್ರಿ ಬಾಗ್ ಮಸೀದಿಯನ್ನು ತೆರವುಗೊಳಿಸುವ ಪ್ರಸ್ತಾವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಇದೇ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ಬಾಕಿ ಇರುವ ಕಾರಣಕ್ಕೆ ಪಿಐಎಲ್ ಅನ್ನು ವಜಾಗೊಳಿಸುವುದಾಗಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನ್ಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪಿ.ಎಸ್. ಅರೋರಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ವಕ್ಫ್ ಆಸ್ತಿಗಳನ್ನು ರಕ್ಷಿಸಲು ದೆಹಲಿ ವಕ್ಫ್ ಮಂಡಳಿಯು ಈಗಾಗಲೇ ಕಾನೂನಿನ ಮೊರೆಹೋಗಿದೆ ಎಂದೂ ನ್ಯಾಯಪೀಠ ತಿಳಿಸಿದೆ. ವಕ್ಫ್ ವೆಲ್ಫೇರ್ ಫೋರಂ ಈ ಪಿಐಎಲ್ ಸಲ್ಲಿಸಿತ್ತು.
ಸುನೆಹ್ರಿ ಬಾಗ್ ಮಸೀದಿಯನ್ನು ತೆರವುಗೊಳಿಸುವ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಆಹ್ವಾನಿಸಿರುವ ನವದೆಹಲಿ ಮುನ್ಸಿಪಲ್ ಕೌನ್ಸಿಲ್ನ (ಎನ್ಡಿಎಂಸಿ) ನೋಟಿಸ್, ಡಿಸೆಂಬರ್ 24ರಂದು ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು.