ಜಾಮ್ನಗರ(ಗುಜರಾತ್):‘ಅಫ್ಗಾನಿಸ್ತಾನದ ಕಾಬೂಲ್ನಿಂದ 120 ಮಂದಿ ಭಾರತೀಯರನ್ನು ಹೊತ್ತ ಐಎಎಫ್ ವಿಮಾನವು ಜಾಮ್ನಗರಕ್ಕೆ ಮಂಗಳವಾರ ಬಂದಿಳಿದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಭಾರತೀಯ ವಾಯುಪಡೆಯ ಸಿ–17 ವಿಮಾನವು ಜಾಮ್ನಗರದ ಐಎಎಫ್ ವಾಯು ನೆಲೆಗೆ ಬೆಳಿಗ್ಗೆ 11.15ಕ್ಕೆ ಬಂತು. ತುರ್ತು ಸ್ಥಳಾಂತರದ ಭಾಗವಾಗಿ ಕಾಬೂಲ್ನಿಂದ ಭಾರತೀಯ ಅಧಿಕಾರಿಗಳನ್ನು ವಾಪಸ್ ಕರೆತರಲಾಗಿದೆ’ ಎಂದು ಅವರು ಹೇಳಿದರು.
‘ವಾಯುನೆಲೆಗೆ ಸಿ–17 ವಿಮಾನ ಆಗಮಿಸುತ್ತಿದ್ದಂತೆ ಭಾರತೀಯ ಅಧಿಕಾರಿಗಳನ್ನು ಸ್ವಾಗತಿಸಲಾಯಿತು. ವಿಮಾನದಲ್ಲಿ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಕೆಲ ಭಾರತೀಯ ಪ್ರಜೆಗಳು ಇದ್ದರು’ ಎಂದು ಅವರು ಮಾಹಿತಿ ನೀಡಿದರು.
‘ಕಾಬೂಲ್ನಿಂದ ಆಗಮಿಸಿರುವ ಭಾರತೀಯರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಈ ಬಳಿಕ ಅಧಿಕಾರಿಗಳನ್ನು ಅವರ ಮನೆಗಳಿಗೆ ತಲುಪಿಸಲಾಗುವುದು’ ಎಂದು ಗುಜರಾತ್ನ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಯ ರಾಜ್ಯ ಸಚಿವ ಧರ್ಮೇಂದ್ರ ಸಿನ್ಹಾ ಜಡೇಜಾ ಅವರು ಹೇಳಿದರು.
‘ಅಫ್ಗಾನಿಸ್ತಾನದಿಂದ ಭಾರತೀಯ ಪ್ರಜೆಗಳನ್ನು ಕರೆತರುವ ಪ್ರಕ್ರಿಯೆ ಮೇಲೆ ಪ್ರಧಾನಿ ನರೇಂದ್ರ ಮೋದಿ ನಿಗಾವಹಿಸಿದ್ದಾರೆ’ ಎಂದು ಗುಜರಾತ್ ಸರ್ಕಾರ ಪ್ರಕಟಣೆಯಲ್ಲಿ ಹೇಳಿದೆ.