ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಗಾಳಿ ಅಪಾಯದ ಸೂಚ್ಯಂಕ ನೀಡಲಿರುವ ಐಎಂಡಿ

Published 3 ಮೇ 2023, 12:40 IST
Last Updated 3 ಮೇ 2023, 12:40 IST
ಅಕ್ಷರ ಗಾತ್ರ

ನವದೆಹಲಿ: ತಾಪಮಾನದಿಂದ ಜನರ ಮೇಲಾಗುವ ಪರಿಣಾಮಗಳನ್ನು ಅಂದಾಜಿಸಲು ಹಾಗೂ ನಿರ್ದಿಷ್ಟ ಪ್ರದೇಶದ ಮೇಲೆ ಬಿಸಿಗಾಳಿಯು ಉಂಟು ಮಾಡಬಹುದಾದ ಪರಿಣಾಮಗಳ ಮುನ್ನೆಚ್ಚರಿಕೆ ನೀಡುವ ‘ಬಿಸಿಗಾಳಿ ಅಪಾಯದ ಸೂಚ್ಯಂಕ’ವನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ವರ್ಷದಿಂದ ನೀಡಲಿದೆ. 

ದೇಶದ ವಿವಿಧ ಭಾಗಗಳಲ್ಲಿ ಗಾಳಿಯ ತಾಪ, ಅದಕ್ಕೆ ಸಂಬಂಧಿಸಿದಂತೆ ಇರುವ ಆ‌ರ್ದ್ರತೆ ಮತ್ತು ಅದು ಯಾವ ಪರಿಣಾಮ ಬೀರಲಿದೆ ಎಂಬ ಕುರಿ‌ತಂತೆ ಬಿಸಿಗಾಳಿ ಸೂಚ್ಯಂಕವನ್ನು ನಿರ್ದಿಷ್ಟ ಪ್ರದೇಶಗಳಲ್ಲಿ ಪ್ರಾಯೋಗಿಕ ರೂಪದಲ್ಲಿ ನೀಡುವುದನ್ನು ಕಳೆದ ವಾರ ಆರಂಭಿಸಲಾಗಿದೆ.

‘ಬಿಸಿಗಾಳಿ ಮತ್ತು ಅಧಿಕ ತಾಪಮಾನವನ್ನು ಅಂದಾಜಿಸಲು ಬಳಸುತ್ತಿರುವ ಅಧ್ಯಯನ ವಿಧಾನಗಳಲ್ಲಿ, ನೀಡುತ್ತಿರುವ ಸೂಚ್ಯಂಕಗಳಲ್ಲಿ ಹಲವು ನೂನ್ಯತೆಗಳಿವೆ’ ಎಂದು ಕೇಂಬ್ರಿಜ್‌ ವಿಶ್ವವಿದ್ಯಾಲಯವು ಎರಡು ವಾರಗಳ ಹಿಂದಷ್ಟೇ ತನ್ನ ವರದಿಯಲ್ಲಿ ಪ್ರಕಟ ಮಾಡಿತ್ತು.

‘ಕಳೆದ ವರ್ಷದ ಬೇಸಿಗೆಗಾಲದಲ್ಲಿ ಕಂಡುಬಂದ ಗರಿಷ್ಠ ಉಷ್ಣಾಂಶ, ಕನಿಷ್ಠ ಉಷ್ಣಾಂಶ, ತೇವಾಂಶ, ಗಾಳಿ ಹಾಗೂ ವಾತಾವರಣದಲ್ಲಿ ಎಷ್ಟು ಸಮಯದವರೆಗೆ ಬಿಸಿಗಾಳಿ ಇತ್ತು ಎನ್ನುವುದನ್ನು ಇಟ್ಟುಕೊಂಡು ನಾನು ಮತ್ತು ನನ್ನ ತಂಡ ವಿಶ್ಲೇಷಣೆ ನಡೆಸಿದೆ. ಇದರ ಪರಿಣಾಮವೇ ಹೊಸ ಸೂಚ್ಯಂಕ’ ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದರು.

‘ಬಿಸಿಗಾಳಿ ಸೂಚ್ಯಂಕವು ಪ್ರಾಯೋಗಿಕವಾದುದು. ಈ ವಿಷಯವನ್ನು ನಾವು ನಮ್ಮ ವೆಬ್‌ಸೈಟ್‌ನಲ್ಲೂ ಹೇಳಿದ್ದೇವೆ. ಆದ್ದರಿಂದ ಬಿಸಿಗಾಳಿಯ ಕುರಿತ ನಿಖರವಾದ ಮಾಹಿತಿ ನೀಡಲು ನಾವೇ ಹೊಸದೊಂದು ವ್ಯವಸ್ಥೆಯನ್ನು ತರಲಿದ್ದೇವೆ. ಅದುವೇ ‘ಬಿಸಿಗಾಳಿ ಅಪಾಯದ ಸೂಚ್ಯಂಕ’. ಇದೊಂದು ಬಹು ಮಾನದಂಡಗಳನ್ನು ಕೂಡಿರುವ ಸೂಚ್ಯಂಕವಾಗಿದೆ. ಇದು ಬೇರೆಲ್ಲಾ ಸೂಚ್ಯಂಕಗಳಿಗಿಂತ ಉತ್ತಮವಾಗಿದೆ ಎಂಬ ಭರವಸೆ ಇದೆ’ ಎನ್ನುತ್ತಾರೆ ಮೃತ್ಯುಂಜಯ.

‘ಬಿಸಿಗಾಳಿ ಸೂಚ್ಯಂಕದಲ್ಲಿ ಗಾಳಿಯಲ್ಲಿನ ಉಷ್ಣತೆ ಹಾಗೂ ಆರ್ದ್ರತೆ ಎನ್ನುವ ಎರಡು ಮಾನದಂಡಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗ, ವಾತಾವರಣದಲ್ಲಿ ಎಷ್ಟು ಸಮಯದವರೆಗೆ ಬಿಸಿಗಾಳಿ ಇರಲಿದೆ ಮತ್ತು ಗಾಳಿ ಯಾವ ರೀತಿ ಇರಲಿದೆ ಎಂಬುದನ್ನೂ ಮಾನದಂಡಗಳನ್ನಾಗಿ ಮಾಡಿಕೊಂಡಿದ್ದೇವೆ’ ಎಂದರು.

‘ಇನ್ನೆರಡು ತಿಂಗಳಲ್ಲಿ ‘ಬಿಸಿಗಾಳಿ ಅಪಾಯದ ಸೂಚ್ಯಂಕ’ವು ಸಿದ್ಧಗೊಳ್ಳಲಿದೆ. ಮುಂದಿನ ಬೇಸಿಗೆಗಾಲದ ಹೊತ್ತಿಗೆ ಈ ಸೂಚ್ಯಂಕವನ್ನು ನೀಡಲು ಪ್ರಾರಂಭಿಸುತ್ತೇವೆ’ ಎಂದರು.

ಆರೋಗ್ಯ ದತ್ತಾಂಶ ಸೇರಿಸಿಲ್ಲ

‘ಬಿಸಿಗಾಳಿ ಅಪಾಯದ ಸೂಚ್ಯಂಕ’ದಲ್ಲಿ ಆರೋಗ್ಯ ದತ್ತಾಂಶವನ್ನು ಮಾನದಂಡವಾಗಿ ಇರಿಸಿಕೊಂಡಿಲ್ಲ. ಏಕೆಂದರೆ, ದೇಶದ ಹಲವು ಪ್ರದೇಶಗಳ ಆರೋಗ್ಯದ ದತ್ತಾಂಶಗಳು ತಕ್ಷಣಕ್ಕೆ ಲಭ್ಯವಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಇದನ್ನೂ ಸೇರಿಸಿಕೊಳ್ಳುವ ಕೆಲಸ ಮಾಡಲಾಗುವುದು ಎಂದು ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ತಿಳಿಸಿದರು.

‘ದಕ್ಷಿಣ ಏಷ್ಯಾದ ದೇಶಗಳಲ್ಲಿ ಮರಣ ಪ್ರಮಾಣದ ಏರಿಕೆ ಕಂಡುಬರಲು ಬಿಸಿಗಾಳಿಯೂ ಪ್ರಮುಖ ಕಾರಣ’ ಎಂದು ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯದ ಕುರಿತ ಅಂತರಸರ್ಕಾರೀಯ ಸಮಿತಿಯು ತನ್ನ ಐದನೇ ವರದಿಯಲ್ಲಿ ಹೇಳಿದೆ.

‘ತಾಪಮಾನದ ಸರಾಸರಿಯಲ್ಲಿ ಅಲ್ಪಮಟ್ಟದ ಏರಿಕೆ ಅಥವಾ ಬಿಸಿಗಾಳಿಯು ವಾತಾವರಣದಲ್ಲಿ ಹೆಚ್ಚು ಸಮಯದವರೆಗೆ ಇರುವುದರಿಂದಲೂ ಭಾರತದಲ್ಲಿ ಮರಣ ಪ್ರಮಾಣದಲ್ಲಿ ಹೆಚ್ಚಿನ ಏರಿಕೆ ಕಂಡುಬರುವ ಸಾಧ್ಯತೆ ಇದೆ. ಒಂದು ವೇಳೆ ಇದಕ್ಕೆ ಪೂರಕವಾದ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಅಪಾಯ ಉಲ್ಬಣಿಸಲಿದೆ’ ಎಂದೂ ವರದಿಯಲ್ಲಿ ಹೇಳಲಾಗಿದೆ.

ಇಂಥ ಸಂಕಷ್ಟ ಎದುರಿದ್ದರೂ ಈವರೆಗೂ ಭಾರತವು ಬಿಸಿಗಾಳಿಯನ್ನು ಪ್ರಾಕೃತಿಕ ವಿಕೋಪ ಎಂದು ಘೋಷಣೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT