ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಿಂಧೂ ನದಿ ನೀರು ಹಂಚಿಕೆ ಕುರಿತಂತೆ ಮಾರ್ಚ್ 23ರ ಮಂಗಳವಾರ ಮಾತುಕತೆ ನಡೆಯಲಿದೆ. ಜತೆಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಈ ಮಾತುಕತೆ ನೆರವಾಗುವ ಸಾಧ್ಯತೆಯಿದೆ.
1960ರ ಸಿಂಧೂ ನದಿ ಒಪ್ಪಂದದ ಪ್ರಕಾರ ರಚಿಸಲ್ಪಟ್ಟಿರುವ ಶಾಶ್ವತ ಸಿಂಧೂ ಆಯೋಗ, ನವದೆಹಲಿಯಲ್ಲಿ ಸಭೆ ಸೇರುತ್ತಿದ್ದು, ಉಭಯ ರಾಷ್ಟ್ರಗಳ ಅಧಿಕಾರಿಗಳು ನೀರು ಹಂಚಿಕೆ ವಿವಾದ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಝಹೀದ್ ಹಫೀಝ್ ಚೌಧರಿ ಈ ವಿಚಾರವನ್ನು ದೃಢಪಡಿಸಿದ್ದು, ಮಾತುಕತೆ ನಡೆಯಲಿದೆ ಎಂದಿದ್ದಾರೆ. ಜತೆಗೆ ಆಯೋಗವು ವರ್ಷದಲ್ಲಿ ಕನಿಷ್ಠ ಒಂದು ಬಾರಿಯಾದರೂ ಸಭೆ ಸೇರಿ, ನೀರು ಹಂಚಿಕೆ ಕುರಿತಂತೆ ಮಾತುಕತೆ ನಡೆಸಲಿದೆ ಎಂದಿದ್ದಾರೆ.
ಈ ಬಾರಿಯ ಮಾತುಕತೆಯಲ್ಲಿ, ದೇಶದ ಪಕುಲ್ ದುಲ್ ಮತ್ತು ಕಾಲ್ನೈ ಹೈಡ್ರೋಎಲೆಕ್ಟ್ರಿಕ್ ಯೋಜನೆಯ ತಾಂತ್ರಿಕ ವಿನ್ಯಾಸದ ಕುರಿತು ಪಾಕಿಸ್ತಾನ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
2019ರಿಂದ ಉಭಯ ರಾಷ್ಟ್ರಗಳ ಮಧ್ಯೆ ಮಾತುಕತೆ ನಡೆದಿಲ್ಲ. ಕಾಶ್ಮೀರದಲ್ಲಿನ ಪಾಕಿಸ್ತಾನದ ದಾಳಿ ಮತ್ತು ನಂತರದ ಬೆಳವಣಿಗೆಗಳು, ಕೋವಿಡ್ 19 ಪರಿಸ್ಥಿತಿಯಿಂದಾಗಿ ಮೂರು ವರ್ಷ ಕಾಲ ಮಾತುಕತೆ ಸ್ಥಗಿತವಾಗಿತ್ತು.