ಜೈಪುರ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಭಾರತೀಯ ಸೇನೆಯು 50 ಹಾಸಿಗೆಗಳ ಆಸ್ಪತ್ರೆಯನ್ನು ಶುಕ್ರವಾರ ಲೋಕಾರ್ಪಣೆ ಮಾಡಿತು. ಸೇನೆಯ ಸುದರ್ಶನ ಚಕ್ರ ವಿಭಾಗವು ಆಸ್ಪತ್ರೆ ಸಜ್ಜುಗೊಳಿಸಿದೆ.
ಭಾರತೀಯ ಸೇನಾ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಯು ಜಿಲ್ಲಾಡಳಿತ ಮತ್ತ ಜನ ಸೇವಾ ಆಸ್ಪತ್ರೆಯ ನೆರವಿನೊಂದಿಗೆ ದಾಖಲೆಯ ಸಮಯದಲ್ಲಿ ಈ ಸೌಲಭ್ಯವನ್ನು ಸ್ಥಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್ ವಿರುದ್ಧದ ಹೋರಾಟದ ಸಲುವಾಗಿ ಭಾರತೀಯ ಸೇನೆಯು ಪ್ರತ್ಯೇಕ ವೈದ್ಯಕೀಯ ಸಿಬ್ಬಂದಿ ಮತ್ತು ಉಪಕರಣಗಳನ್ನು ಒದಗಿಸುತ್ತದೆ. ಸೋಂಕಿತರಿಗೆ ಸೇನೆಯಿಂದ ಆಂಬುಲೆನ್ಸ್ ಸೇವೆಯನ್ನೂ ನೀಡಲಾಗುತ್ತದೆ. ಜಿಲ್ಲೆಯ ವೈದ್ಯಕೀಯ ಆಡಳಿತ ಮತ್ತು ಜನ ಸೇವಾ ಆಸ್ಪತ್ರೆಯು ಈ ಸೇವೆಗಳನ್ನು ಸಂಯೋಜಿಸುತ್ತದೆ.
ಜಿಲ್ಲಾಧಿಕಾರಿ ಜಾಕಿರ್ ಹುಸೇನ್ ಅವರು ಆಸ್ಪತ್ರೆಯನ್ನು ಉದ್ಘಾಟಿಸಿದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಸೇನೆಯು ಭರವಸೆ ನೀಡಿದೆ.