ನವದೆಹಲಿ: ಬಡ್ತಿಯಲ್ಲಿ ಮೀಸಲಾತಿ ನೀಡುವಾಗ ಹಿಂದುಳಿದಿರುವಿಕೆ, ಪ್ರಾತಿನಿಧ್ಯದ ಕೊರತೆ ಹಾಗೂ ದಕ್ಷತೆ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ನ ತೀರ್ಪು ಸೂಚಿಸಿದೆ. ಆದರೆ, ಈ ಬಗ್ಗೆ ಸ್ಪಷ್ಟತೆಯೇ ಇಲ್ಲ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಪರ ವಕೀಲರಾದ ಇಂದಿರಾ ಜೈಸಿಂಗ್ ತಿಳಿಸಿದರು.
‘ಮೀಸಲಾತಿ ಆಧಾರದಲ್ಲಿ ಬಡ್ತಿ ಪಡೆದ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ’ ನೂತನ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಬಿ.ಕೆ. ಪವಿತ್ರ ಸಲ್ಲಿಸಿರುವ ಮೇಲ್ಮನವಿಯ ಮುಂದುವರಿದ ವಿಚಾರಣೆ ವೇಳೆಮಂಗಳವಾರ ಅವರು ವಾದ ಮಂಡಿಸಿದರು.
ಆಯಾ ಪ್ರದೇಶಗಳ, ಸಮುದಾಯಗಳ ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಮಾಣ ನಿಗದಿಪಡಿಸುವ ಅಗತ್ಯವಿದೆ. ಆದರೆ, ಮಹತ್ವದ ಮೂರು ಅಂಶಗಳ ಮಾಹಿತಿ ಒದಗಿಸುವಂತೆ ಸೂಚಿಸಲಾದ ತೀರ್ಪುಗಳಲ್ಲಿ ಈ ಕುರಿತ ವ್ಯಾಖ್ಯಾನ ಇಲ್ಲ ಎಂದು ಹೇಳಿದರು.
ಕೆನೆಪದರದ ತತ್ವ ಪಾಲಿಸುವಂತೆಯೂ ತೀರ್ಪುಗಳು ತಿಳಿಸಿವೆ. ಆದರೆ, ಈ ತತ್ವವು ಹಿಂದುಳಿದಿರುವಿಕೆಯನ್ನೇ ಆಧರಿಸಿದ್ದಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಿಂದುಳಿದಿರುವಿಕೆ ನಿರಂತರವಾಗಿದೆ. ಹಾಗಾಗಿ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲೂ ಈ ತತ್ವವನ್ನು ವ್ಯಾಖ್ಯಾನಿಸಬಹುದಾಗಿದೆ ಎಂದರು.
ನಿಗಮ ಮತ್ತು ಮಂಡಳಿಗಳ ನೌಕರರಿಗೆ ಸಂಬಂಧಿಸಿದ ಮಾಹಿತಿಯು ರತ್ನಪ್ರಭಾ ಸಮಿತಿಯ ವರದಿಯಲ್ಲಿ ಇಲ್ಲ ಎಂದು ಅರ್ಜಿದಾರ ಬಿ.ಕೆ. ಪವಿತ್ರ ಪರ ವಕೀಲ ರಾಜೀವ್ ಧವನ್ ನ್ಯಾಯಪೀಠದ ಗಮನ ಸೆಳೆದರು.
ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ ತಮ್ಮ ವಾದ ಅಂತ್ಯಗೊಳಿಸಿದರು. ಬುಧವಾರ ಇಂದಿರಾ ವಾದ ಮುಂದುವರಿಯಲಿದೆ.