ರಾಂಚಿ: ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಸಂಸ್ಥಾಪಕ ಶಿಬು ಸೊರೇನ್ ಅವರ ಕಿರಿಯ ಪುತ್ರ ಬಸಂತ್ ಸೊರೇನ್ ಶುಕ್ರವಾರ ಚಂಪೈ ಸೊರೇನ್ ಸಂಪುಟದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಸಂತ್ ಸೊರೇನ್, ಭೂ ಹಗರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಸಹೋದರ.
12 ಸಚಿವರ ಚಂಪೈ ಸಂಪುಟದಲ್ಲಿ ಚಾಈಬಾಸಾ ಹಾಗೂ ದುಮ್ಕಾ ವಿಧಾನಸಭಾ ಕ್ಷೇತ್ರಗಳ ಜೆಎಂಎಂ ಶಾಸಕರಾದ ದೀಪಕ್ ಬಿರುವಾ ಮತ್ತು ಬಸಂತ್ ಸೊರೇನ್ ಮೊದಲ ಬಾರಿಗೆ ಸಚಿವರಾಗಿದ್ದಾರೆ.
ಈ ಹಿಂದಿನ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಕಾಂಗ್ರೆಸ್ನ ರಾಮೇಶ್ವರ್ ಒರಾನ್, ಬನ್ನಾ ಗುಪ್ತಾ, ಬಾದಲ್ ಪತ್ರಲೇಖ್ ಹಾಗೂ ಜೆಎಂಎಂನ ಮಿಥಿಲೇಶ್ ಕುಮಾರ್ ಠಾಕೂರ್, ಹಫಿಜುಲ್ ಹಸನ್ ಮತ್ತು ಬೇಬಿ ದೇವಿ ಅವರು ಚಂಪೈ ಸರ್ಕಾರದಲ್ಲೂ ಸಚಿವರಾಗಿದ್ದಾರೆ.