ಹಜೊ, ಅಸ್ಸಾಂ: ‘ನಾನು ಧೃತಿಗೆಡುವುದಿಲ್ಲ. ಇಡೀ ಜಗತ್ತು ನನ್ನ ವಿರುದ್ಧ ನಿಂತರೂ ಸತ್ಯಕ್ಕಾಗಿ ಹೋರಾಟ ನಡೆಸುತ್ತೇನೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಹೇಳಿದ್ದಾರೆ.
ಗುವಾಹಟಿ ಬಳಿ ನ್ಯಾಯಯಾತ್ರೆ ತಡೆದ ವೇಳೆ ಘರ್ಷಣೆ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನನಗೆ ಸಂತಸವಾಗಿದೆ. ಬಿಜೆಪಿ ಯಾತ್ರೆಗೆ ಅಡ್ಡಿಪಡಿಸಲಿ ಎಂದು ನಾನು ಬಯಸುತ್ತೇನೆ. ಇದು, ಹೆಚ್ಚಿನ ಪ್ರಚಾರ ನೀಡಲಿದೆ’ ಎಂದರು.
‘ಯಾತ್ರೆಗೆ ಅಡ್ಡಿಪಡಿಸುವ ಮೂಲಕ ಬಿಜೆಪಿ ನಮಗೆ ಅಂತಿಮವಾಗಿ ಸಹಾಯವನ್ನೇ ಮಾಡುತ್ತಿದೆ. ಇದನ್ನು ಹಿಂಸೆ ಎಂದು ಹೇಳುವುದಿಲ್ಲ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಸ್ವಲ್ಪ ಪೆಟ್ಟಾಗಿದೆ. ಅದನ್ನು ನಾವು ಎದುರಿಸುತ್ತೇವೆ. ಇದು, ಚಿಂತಿಸುವ ವಿಷಯವೇ ಅಲ್ಲ. ಒಮ್ಮೆ ಮನಸ್ಸು ಮಾಡಿದ್ದೇನೆ. ನನ್ನ ಸಿದ್ಧಾಂತಕ್ಕಾಗಿ ಹೋರಾಡುತ್ತೇನೆ ಎಂದರು.
ಇದಕ್ಕೆ ಮುನ್ನ ಗುವಾಹಟಿಯಲ್ಲಿ ಮಾತನಾಡಿದ ಅವರು, ‘ಮೇಘಾಲಯದಲ್ಲಿ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸದಂತೆಯೂ ತಡೆಯಲಾಯಿತು’ ಎಂದು ಆರೋಪಿಸಿದ್ದಾರೆ.
‘ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿರ್ದೇಶನವನ್ನು ಮುಖ್ಯಮಂತ್ರಿಯವರ ಕಚೇರಿ ಮೂಲಕ ವಿಶ್ವವಿದ್ಯಾಲಯದ ಆಡಳಿತಕ್ಕೆ ರವಾನಿಸಲಾಗಿದೆ’ ಎಂದು ಆರೋಪಿಸಿದರು.
ವಿ.ವಿ ಕ್ಯಾಂಪಸ್ನ ಹೊರಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಹುಲ್ಗಾಂಧಿಗೆ ಮಾತನಾಡಲು ಅವಕಾಶ ಸಿಗುವುದಾ ಎಂಬುದು ಮುಖ್ಯವಲ್ಲ. ನೀವು ಬಯಸಿದ್ದನ್ನು ಕೇಳಲು ಅವಕಾಶ ನೀಡುತ್ತಿಲ್ಲ ಎಂಬುದು ಗಮನಿಸಬೇಕು. ಅವರು ನಿಮ್ಮನ್ನು ಗುಲಾಮರಾಗಿಸಲು ಬಯಸುತ್ತಿದ್ದಾರೆ. ಇಂಥ ಬೆಳವಣಿಗೆ ಅಸ್ಸಾಂನಲ್ಲಿ ಯಷ್ಟೇ ಅಲ್ಲ. ಎಲ್ಲ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲೂ ನಡೆಯುತ್ತಿದೆ’ ಎಂದರು.