ಚಂಡೀಗಢ: ಪಂಜಾಬ್ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಉಗ್ರ ಸಂಘಟನೆಯ ಸಹಚರರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ್ ರಿಂದಾನ ಪ್ರಮುಖ ಸಹಚರನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.
ರಾಜಸ್ಥಾನದ ಲೋಹಾವಟ್ನಲ್ಲಿ ಉಗ್ರನನ್ನು ಬಂಧಿಸಲಾಗಿದ್ದು, ಚೀನಾದಲ್ಲಿ ತಯಾರಿಸಿರುವ ಪಿಸ್ತೂಲ್, ಜೀವಂತ ಕಾಟ್ರಿಡ್ಜ್ ವಶಪಡಿಸಿಕೊಳ್ಳಲಾಗಿದೆ.
‘ಪ್ರಮುಖ ಬೆಳವಣಿಗೆಯೊಂದರಲ್ಲಿ ಗ್ಯಾಂಗ್ಸ್ಟರ್ಗಳ ನಿಗ್ರಹ ಕಾರ್ಯಪಡೆಯು(ಎಜಿಟಿಎಫ್) ಕೇಂದ್ರೀಯ ತನಿಖಾ ಸಂಸ್ಥೆಗಳ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ಉಗ್ರ ಹರ್ವಿಂದರ್ ಸಿಂಗ್ ಮತ್ತು ಹರಪ್ರೀತ್ ಸಿಂಗ್ನ ಪ್ರಮುಖ ಸಹಚರ ಕೈಲಾಶ್ ಕಿಚನ್ನನ್ನು ಬಂಧಿಸಲಾಗಿದೆ’ ಎಂದು ಯಾದವ್, ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ ಮಾಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ರಿಂದಾ ನಿರ್ದೇಶನದ ಮೇರೆಗೆ ಕಿಚನ್, ಪಂಜಾಬ್ನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಬಬ್ಬರ್ ಖಾಲಸಾ ಅಂತರರಾಷ್ಟ್ರೀಯ(ಬಿಕೆಐ) ಸಂಘಟನೆಯ ಸಹಚರರಿಗೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ.
2023ರಲ್ಲಿ ಫಾಜಿಲ್ಕಾದಲ್ಲಿ ದಾಖಲಾಗಿದ್ದ ಯುಎಪಿಎ ಪ್ರಕರಣದಲ್ಲಿ ಕಿಚನ್ ಪೊಲೀಸರಿಗೆ ಬೇಕಾಗಿದ್ದ ಎಂದು ಡಿಜಿಪಿ ತಿಳಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪಿ ವಿರುದ್ಧ ಸುಲಿಗೆ, ಡ್ರಗ್ಸ್ ಸರಬರಾಜು ಸಂಬಂಧಿಸಿದ ಪ್ರಕರಣಗಳು ಇವೆ.
ಇತ್ತೀಚೆಗೆ, ಪಂಜಾಬ್ ಪೊಲೀಸರು ಭೇದಿಸಿದ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಕಿಚನ್ ಹೆಸರು ಕೇಳಿಬಂದಿತ್ತು. ಎಜಿಟಿಎಫ್ನ ತಂಡಗಳ ನೇತೃತ್ವ ವಹಿಸಿರುವ ಹೆಚ್ಚುವರಿ ಡಿಜಿಪಿ ಪ್ರಮೋದ್ ಬನ್ ಅವರು, ರಾಜಸ್ಥಾನದಲ್ಲಿ ಕಿಚನ್ ಇರುವಿಕೆ ಬಗ್ಗೆ ಮಾಹಿತಿ ಕಲೆ ಹಾಕಿ ಕೇಂದ್ರೀಯ ತನಿಖಾ ಸಂಸ್ಥೆಗಳ ನೆರವು ಪಡೆದು ಬಂಧಿಸಿದ್ದಾರೆ.