ಲಖನೌ: ಸಂಸದ ಪ್ರತಾಪ್ ಸಿಂಹ ಅವರ ಶಿಫಾರಸಿನ ಮೇಲೆ ಲೋಕಸಭಾ ಕಲಾಪಕ್ಕೆ ಪಾಸ್ ಪಡೆದ ಸಾಗರ್ ಶರ್ಮಾ, ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿದ್ದ. ಇತ್ತೀಚೆಗೆ ಲಖನೌದಲ್ಲಿ ಇ–ರಿಕ್ಷಾ ಓಡಿಸುತ್ತಿದ್ದ ಎಂಬ ಅಂಶವನ್ನು ಆತನ ಸಹೋದರಿ ಹೇಳಿದ್ದಾರೆ.
ಲೋಕಸಭಾ ಕಲಾಪದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿ ಮೈಸೂರಿನ ಮನೋರಂಜನ್ ಜತೆಗಿದ್ದ ಸಾಗರ್ ಶರ್ಮಾ, ಸದನದೊಳಗೆ ಬುಧವಾರ ನುಗ್ಗಿದ್ದರು. ಹಳದಿ ಬಣ್ಣದ ಹೊಗೆ ಸಿಂಪಡಿಸಿ, ಘೋಷಣೆಗಳನ್ನು ಕೂಗಿದರು. ನಂತರ ಸಂಸದರು ಹಾಗೂ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ಈ ಇಬ್ಬರು ಸದ್ಯ ಪೊಲೀಸರ ಅತಿಥಿಗಳಾಗಿದ್ದಾರೆ.
ಉತ್ತರ ಪ್ರದೇಶದ ರಾಮನಗರದ ನಿವಾಸಿಯಾದ ಸಾಗರ್ (28) ಕುಟುಂಬ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ತಂದೆ ರೋಶನ್ ಲಾಲ್ ಮರದ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ.