ಬಹರಾಂಪುರ ಕ್ಷೇತ್ರದಲ್ಲಿ ಅಧೀರ್ ರಂಜನ್ ಚೌಧರಿ ಅವರಂತಹ ಪ್ರಬಲ ಅಭ್ಯರ್ಥಿಯನ್ನು ಮಣಿಸಲು ಟಿಎಂಸಿ, ಈ ಬಾರಿ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಅಖಾಡಕ್ಕಿಳಿಸಿದೆ. ಟಿಎಂಸಿ ಅಭ್ಯರ್ಥಿಯಾಗಿ 41ವರ್ಷದ ಯೂಸುಫ್ ಅವರ ಹೆಸರನ್ನು ಘೋಷಿಸಿದ ಕೂಡಲೇ ಪ್ರತಿಸ್ಪರ್ಧಿಗಳು ಅವರಿಗೆ ಹೊರಗಿನವರೆಂಬ ಹಣೆಪಟ್ಟಿ ನೀಡಿದ್ದಾರೆ. ಗುಜರಾತ್ನ ವಡೋದರದ ಯೂಸುಫ್, 2021ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಯೂಸುಫ್ ಅವರಿಗೆ ಪಕ್ಷದಿಂದ ಟಿಕೆಟ್ ನೀಡಿದ್ದಕ್ಕೆ ಟಿಎಂಸಿಯ ಕೆಲವು ನಾಯಕರು ಆರಂಭದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಸ್ಲಿಂ ಮತಗಳನ್ನು ವಿಭಜಿಸುವ ಉದ್ದೇಶದಿಂದ ಯೂಸುಫ್ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕ್ರಿಕೆಟ್ ಆಟಗಾರರಾಗಿ ಪ್ರಸಿದ್ಧರಾಗಿದ್ದರೂ ರಾಜಕೀಯದಲ್ಲಿ ಅನನುಭವಿಯಾಗಿರುವ ಯೂಸುಫ್ ಅವರು ಅನುಭವಿ ರಾಜಕಾರಣಿ ಚೌಧರಿ ಅವರನ್ನು ಮಣಿಸುತ್ತಾರೊ ಎಂಬುದನ್ನು ಕಾದು ನೋಡಬೇಕಿದೆ.