ನವದೆಹಲಿ: ಲುಧಿಯಾನ ಕೋರ್ಟ್ ಸ್ಫೋಟದ ಆರೋಪಿ, ಹಲವು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಭಯೋತ್ಪಾದಕ ಹರ್ಪ್ರೀತ್ ಸಿಂಗ್ನನ್ನು ರಾಷ್ಟ್ರೀಯ ತನಿಖಾ ದಳ ಶುಕ್ರವಾರ ಬಂಧಿಸಿದೆ.
ಮಲೇಷ್ಯಾದಿಂದ ಭಾರತಕ್ಕೆ ಬಂದಿಳಿದಿದ್ದ ಹರ್ಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಮಲೇಷ್ಯಾನನ್ನು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಸಿಂಗ್ ಕುರಿತು ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಈ ಮೊದಲು ಎನ್ಐಎ ಘೋಷಿಸಿತ್ತು. ಎನ್ಐಎ ವಿಶೇಷ ನ್ಯಾಯಾಲಯ ಈತನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿತ್ತು.
2021ರ ಲುಧಿಯಾನ ಕೋರ್ಟ್ ಸ್ಫೋಟದ ಸಂಚುಕೋರನಾಗಿದ್ದ. ಈ ಭಯೋತ್ಪಾದಕ ಕೃತ್ಯದಲ್ಲಿ ಓರ್ವ ವ್ಯಕ್ತಿ ಮೃತಪಟ್ಟು, 6 ಜನ ಗಾಯಗೊಂಡಿದ್ದರು.
ಲುಧಿಯಾನ ಸ್ಪೋಟದ ಪ್ರಮುಖ ಆರೋಪಿ ಪಾಕ್ ಮೂಲದ ಭಯೋತ್ಪಾದಕ ಲಖ್ಬೀರ್ ಸಿಂಗ್ ರೋಡೆಗೆ ಈತ ಸಹಾಯಕನಾಗಿದ್ದ. ರೋಡೆ ಮಾರ್ಗದರ್ಶನದಂತೆ ಹರ್ಪ್ರೀತ್ ಸ್ಫೋಟಕವನ್ನು ಪಾಕಿಸ್ತಾನದಿಂದ ಭಾರತಕ್ಕೆ ರವಾನಿಸುವಲ್ಲಿ ಭಾಗಿಯಾಗಿದ್ದ. ಇದಲ್ಲದೆ ಹಲವು ಪ್ರಕರಣಗಳಲ್ಲಿ ಈತ ಬೇಕಾಗಿದ್ದ ಎಂದು ಎನ್ಐಎ ಹೇಳಿದೆ.