ಶ್ರೀನಗರ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಗುರುವಾರ ಇಲ್ಲಿನ ಜಾರಿ ನಿರ್ದೇಶನಾಲಯದ(ಇಡಿ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ರಾಜ್ಬಾಗ್ನ ಜಾರಿ ನಿರ್ದೇಶನಾಲಯ ಕಚೇರಿ ತಲುಪಿದ ಮುಫ್ತಿ ಅವರು, ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು.
ಇದಕ್ಕೂ ಮೊದಲು ಈ ಪ್ರಕರಣದ ವಿಚಾರಣೆಗಾಗಿ ದೆಹಲಿಗೆ ಬರುವಂತೆ ಇಡಿ ಅಧಿಕಾರಿಗಳು ಮೆಹಬೂಬಾ ಅವರಿಗೆ ನೋಟಿಸ್ ನೀಡಿದ್ದರು. ಆದರೆ, ದೆಹಲಿಯ ಬದಲು ಶ್ರೀನಗರದ ಕಚೇರಿಯಲ್ಲಿ ವಿಚಾರಣೆ ನಡೆಸುವಂತೆ ಕೋರಿ ಮುಫ್ತಿ ಅವರು ಮನವಿ ಸಲ್ಲಿಸಿದ್ದರು. ಮನವಿಯನ್ನು ಅಂಗೀಕರಿಸಿ, ಇಲ್ಲೇ ವಿಚಾರಣೆಗೆ ಅವಕಾಶ ಕಲ್ಪಿಸಲಾಯಿತು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಒಂದು ವರ್ಷಕ್ಕೂ ಹೆಚ್ಚು ಕಾಲ ಗೃಹಬಂಧನದಲ್ಲಿದ್ದು ಬಿಡುಗಡೆಯಾಗಿರುವ 61 ವರ್ಷದ ಮೆಹಬೂಬಾ ಮುಫ್ತಿ ಅವರಿಗೆ, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಕಚೇರಿ ನೋಟಿಸ್ ನೀಡಿತ್ತು.