ಕಾನ್ಪುರ(ಉತ್ತರ ಪ್ರದೇಶ): ಕಾನ್ಪುರದ ದಾಮದೋರ್ ನಗರದ ಬಾರ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ಖಾಲಿ ಜಾಗವೊಂದರಲ್ಲಿ ಹಲವು ಮಾನವನ ತಲೆಬುರುಡೆಗಳು, ಮೂಳೆಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಪೊಲೀಸ್ ಆಯುಕ್ತ (ದಕ್ಷಿಣ) ರವೀಂದ್ರ ಕುಮಾರ್, ‘ವಿಧಿವಿಜ್ಞಾನ ತಜ್ಞರಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ’ ಎಂದರು.
‘ಲಿಂಗ, ವಯಸ್ಸು ಮತ್ತು ಸಾವಿನ ಕಾರಣವನ್ನು ಪತ್ತೆ ಮಾಡಲು ಮೂಳೆಗಳ ವೈಜ್ಞಾನಿಕ ಅಧ್ಯಯನವನ್ನು ಕೈಗೊಳ್ಳಬೇಕು ಎಂದು ವಿಧಿವಿಜ್ಞಾನ ತಜ್ಞರು ತಿಳಿಸಿದ್ದಾರೆ. ತಲೆಬುರುಡೆಗಳು ಮತ್ತು ಮೂಳೆಗಳನ್ನು ಗಮನಿಸಿದರೆ ತುಂಬಾ ಹಳೆಯದಾಗಿ ಕಾಣುತ್ತಿವೆ’ ಎಂದರು.
‘ಮೆಲ್ನೋಟಕ್ಕೆ ತಲೆಬುರುಡೆ ಮತ್ತು ಮೂಳೆಗಳನ್ನು ಬೇರೆಡೆಯಿಂದ ತಂದು ಇಲ್ಲಿ ಎಸೆದಿರುವಂತೆ ಕಾಣಿಸುತ್ತಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ’ ಎಂದು ಹೆಚ್ಚುವರಿ ಡಿಸಿಪಿ (ದಕ್ಷಿಣ) ಅಂಕಿತಾ ಶರ್ಮಾ ತಿಳಿಸಿದರು.
ಪತ್ತೆಯಾದ ತಲೆಬುರುಡೆಗಳು ಎಷ್ಟು ಎಂಬುವುದು ನಿರ್ದಿಷ್ಟವಾಗಿ ತಿಳಿದುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.