ಕೋಲ್ಕತ್ತ: ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ(ಎನ್ಸಿಎಸ್ಟಿ) ಮೂವರು ಸದಸ್ಯರ ನಿಯೋಗ ಗುರುವಾರ ಬೆಳಿಗ್ಗೆ ಹಿಂಸಾಚಾರ ಪೀಡಿತ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಗೆ ಭೇಟಿ ನೀಡಿದೆ.
ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ ನೀಡಿದ ಒಂದು ದಿನದ ನಂತರ ಎನ್ಸಿಎಸ್ಟಿ ತಂಡ ಅಲ್ಲಿಗೆ ತೆರಳಿದೆ.
‘ಸಮಸ್ಯೆಯ ಮೂಲ ತಿಳಿದುಕೊಳ್ಳಲು ಸ್ಥಳಕ್ಕೆ ಭೇಟಿ ನೀಡುತ್ತಿದ್ದೇವೆ. ಜನರನ್ನು ಖುದ್ದು ಮಾತನಾಡಿಸುವ ಮೂಲಕ ಅವರ ದೂರುಗಳನ್ನು ಪರಿಶೀಲಿಸಲಾಗುತ್ತದೆ’ ಎಂದು ಎನ್ಸಿಎಸ್ಟಿ ಹಂಗಾಮಿ ಅಧ್ಯಕ್ಷ ಅನಂತ ನಾಯಕ್ ಸುದ್ದಿಗಾರರಿಗೆ ತಿಳಿಸಿದರು.
ಸಂದೇಶ್ಖಾಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಬುಧವಾರ ಪಶ್ವಿಮ ಬಂಗಾಳ ಸರ್ಕಾರ ಮತ್ತು ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ನೀಡಿದೆ.
ತೃಣಮೂಲ ಕಾಂಗ್ರೆಸ್ನ ನಾಯಕ ಷಹಜಹಾನ್ ಶೇಖ್ ಮತ್ತು ಆತನ ಬೆಂಬಲಿಗರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು, ನಮ್ಮ ಭೂಮಿಯನ್ನು ಕಬಳಿಸುತ್ತಿದ್ದಾರೆ ಎಂದು ಆರೋಪಿಸಿರುವ ಅಲ್ಲಿನ ಮಹಿಳೆಯರು, ಪ್ರತಿಭಟನೆ ನಡೆಸಿದ್ದರು.