ನವದೆಹಲಿ: ಖಾತೆ ಹಂಚಿಕೆ ಸಂಬಂಧ ಉಂಟಾಗಿರುವ ಅಸಮಾಧಾನದ ಬೆನ್ನಲ್ಲೇ, ಎನ್ಸಿಪಿ ನಾಯಕರಾದ ಅಜಿತ್ ಪವಾರ್ ಹಾಗೂ ಪ್ರಫುಲ್ ಪಟೇಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ಹಿರಿಯ ನಾಯಕರನ್ನು ಬುಧವಾರ ರಾತ್ರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯ 8 ಮಂದಿ ಶಿವಸೇನಾ – ಬಿಜೆಪಿ ಮೈತ್ರಿ ಸರ್ಕಾರಕ್ಕೆ ಸೇರಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು. ಇವರಿಗೆ ಖಾತೆ ಹಂಚಿಕೆ ಸಂಬಂಧ ಅಸಮಾಧಾನ ಉಂಟಾಗಿತ್ತು.
ಮಹಾರಾಷ್ಟ್ರದಲ್ಲಿ ಮೈತ್ರಿಗೆ ಸೇರಿದ ಬಳಿಕ ಅಜಿತ್ ಹಾಗೂ ತಾವು ಬಿಜೆಪಿ ನಾಯಕರನ್ನು ಭೇಟಿ ಮಾಡಿರಲಿಲ್ಲ. ಶಾ ಹಾಗೂ ಬಿಜೆಪಿ ನಾಯಕರೊಂದಿಗಿನ ಮಾತುಕತೆ ‘ಸೌಜನ್ಯದ ಭೇಟಿ‘ಯಷ್ಟೇ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ.
‘ಕಳೆದ ವರ್ಷ ಬಿಜೆಪಿ ಹಾಗೂ ಶಿವಸೇನಾ ಅವಧಿಯಲ್ಲಿ ಹಂಚಿಕೆಯಾದ ಖಾತೆಗಳ ವಿಷಯದಲ್ಲಿ ಕೆಲವು ಸಮಸ್ಯೆಗಳಿವೆ. ಹೀಗಾಗಿ ಉಭಯ ಪಕ್ಷಗಳು ಕೆಲವೊಂದು ಖಾತೆಗಳನ್ನು ನಮಗೆ ನೀಡಬೇಕು‘ ಎಂದು ಪಟೇಲ್ ಹೇಳಿದ್ದಾರೆ.
ಹಣಕಾಸು ಹಾಗೂ ನೀರಾವರಿ ಮುಂತಾದ ಪ್ರಬಲ ಖಾತೆಗಳಿಗೆ ಎನ್ಸಿಪಿ ಬೇಡಿಕೆ ಇಟ್ಟಿದ್ದು, ಇದಕ್ಕೆ ಶಿವಸೇನಾದಿಂದ ಭಾರಿ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.