ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ನ ಸಂಸದ ಗೌರವ್ ಗೊಗೊಯ್ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಂಗೀಕರಿಸಿದ್ದಾರೆ.
ನಿಯಮಗಳ ಪ್ರಕಾರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್ಗೆ 50 ಸಂಸದರ ಸಹಿ ಬೇಕು. ಕಾಂಗ್ರೆಸ್ ಸಂಸದ ನೀಡಿದ್ದ ನೋಟಿಸ್ ಕ್ರಮಬದ್ಧವಾಗಿದ್ದರಿಂದ ಸ್ಪೀಕರ್ ಅವರು ನೋಟಿಸ್ ಅನ್ನು ಅಂಗೀಕರಿಸಿದ್ದಾರೆ.
ಮಣಿಪುರ ಗಲಭೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಆದರೆ ಈವರೆಗೂ ಪ್ರಧಾನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡಿಸಿ ಪ್ರಧಾನಿಯಿಂದ ಪ್ರತಿಕ್ರಿಯೆ ಪಡೆದುಕೊಳ್ಳಬೇಕು ಎನ್ನುವುದು ವಿಪಕ್ಷಗಳ ಯೋಜನೆ.
ಸಂಖ್ಯಾಬಲದಲ್ಲಿ ಈ ಅವಿಶ್ವಾಸ ನಿರ್ಣಯ ಮಂಡನೆಗೆ ಸೋಲಾಗುವುದು ನಿಶ್ಚಿತ. ಆದರೆ ಮಣಿಪುರ ಗಲಭೆ ಸಂಬಂಧ ಪ್ರಧಾನಿಯಿಂದ ಹೇಳಿಕೆ ಪಡೆದು ನೈತಿಕವಾಗಿ ಗೆಲ್ಲಬಹುದು ಎನ್ನುವುದು ಪ್ರತಿಪಕ್ಷಗಳ ಲೆಕ್ಕಾಚಾರ.
ಈವರೆಗೂ 27 ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದು, ಕೇವಲ ಮೂರು ಬಾರಿ ಮಾತ್ರ ಪ್ರತಿಪಕ್ಷಗಳಿಗೆ ಗೆಲುವಾಗಿದೆ. ಇಂದಿರಾ ಗಾಂಧಿ ವಿರುದ್ಧ ಅತೀ ಹೆಚ್ಚು ಅಂದರೆ 15 ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆಯಾಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2018ರಲ್ಲಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಆದರೆ ಅದರಲ್ಲಿ ಪ್ರಧಾನಿ ಮೋದಿ ಗೆದ್ದಿದ್ದರು.|
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.