ಭುವನೇಶ್ವರ: ಕಾಲೇಜು ಹಣ ದುರುಪಯೋಗ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಬಿಜೆಡಿ ಶಾಸಕನ ಪುತ್ರನನ್ನು ಜಾರಿ ನಿರ್ದೇಶನಾಲಯ (ಇ.ಡಿ) 18 ತಾಸು ವಿಚಾರಣೆಗೊಳಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದ ಭದ್ರಕ್ ಜಿಲ್ಲೆಯ ಖಾಸಗಿ ಕಾಲೇಜಿನ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಡಿ ಶಾಸಕ ಪ್ರಫುಲ್ಲ ಸಮಲ್ ಅವರ ಪುತ್ರ ಪ್ರಯಾಸ್ ಕಾಂತಿ ಸಮಲ್ ಅವರನ್ನು ಇ.ಡಿ, ಸತತ 18 ತಾಸು ಕಾಲ ವಿಚಾರಣೆಗೆ ಒಳಪಡಿಸಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರವಷ್ಟೇ ಶಾಸಕರನ್ನು ಎಂಟು ತಾಸು ವಿಚಾರಣೆಗೊಳಪಡಿಸಲಾಯಿತು.
ಮಂಗಳವಾರ ಆರಂಭವಾದ ವಿಚಾರಣೆ ಬುಧವಾರ ಬೆಳಗ್ಗಿನ ಜಾವ 4.30ರವರೆಗೆ ಮುಂದುವರಿಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬರಪದ ಸ್ಕೂಲ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ (ಬಿಎಸ್ಇಟಿ) ಕೋಟ್ಯಂತರ ರೂಪಾಯಿ ದುರುಪಯೋಗ ಮಾಡಿದ ಪ್ರಕರಣದಲ್ಲಿ ಆರೋಪಿಯ ಮನೆಯಿಂದ ಕಳೆದ ತಿಂಗಳಲ್ಲಿ ₹9 ಲಕ್ಷ ನಗದು ಮತ್ತು ಐಷಾರಾಮಿ ಕಾರು ಅನ್ನು ಇ.ಡಿ ವಶಪಡಿಸಿತ್ತು.
2016ರಲ್ಲಿ ಒಡಿಶಾ ಪೊಲೀಸ್ ದಾಖಲಿಸಿದ್ದ ಎಫ್ಐಆರ್ ಆಧರಿಸಿ ಇ.ಡಿ, ಪ್ರಕರಣ ಕೈಗೆತ್ತಿಕೊಂಡಿದೆ. ಕಳೆದು ತಿಂಗಳು ಭುವನೇಶ್ವರ ಹಾಗೂ ಭದ್ರಕ್ನ 10 ಸ್ಥಳಗಳಲ್ಲಿ ಇ.ಡಿ. ಶೋಧ ನಡೆಸಿತ್ತು.
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸರ್ಕಾರದಲ್ಲಿ ಮಾಜಿ ಸಚಿವರಾಗಿದ್ದ ಪ್ರಫುಲ್ಲ ಸಮಲ್, ಇ.ಡಿ ದಾಳಿಯನ್ನು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.