ಒಡಿಶಾದ ಬಾಲಸೋರ್ ಬಳಿ ಸಂಭವಿಸಿದ ರೈಲು ಅಪಘಾತದಲ್ಲಿ ಗಾಯಗೊಂಡಿರುವ ಪ್ರಯಾಣಿಕರೊಬ್ಬರಿಗೆ ಹೌರಾ ರೈಲು ನಿಲ್ದಾಣದಲ್ಲಿ ಬಂದಿಳಿದ ನಂತರ ಶನಿವಾರ ಚಿಕಿತ್ಸೆ ನೀಡಲಾಯಿತು –ಪಿಟಿಐ ಚಿತ್ರ
ರಕ್ತಸಿಕ್ತ ದೇಹಗಳು...
ರಕ್ತಸಿಕ್ತ ಹಾಗೂ ವಿರೂಪಗೊಂಡ ಮೃತದೇಹಗಳು ಅಪಘಾತದ ಗಂಭೀರತೆಯನ್ನು ಹೇಳುತ್ತಿದ್ದವು. ಡಿಕ್ಕಿಯ ರಭಸಕ್ಕೆ ಸಿಲುಕಿ ಸತ್ತವರ ದೇಹಗಳು ಒಂದರ ಮೇಲೊಂದು ಹಾಗೂ ಒಂದಕ್ಕೊಂದು ತಾಗಿ ಬಿದ್ದ ಪರಿಣಾಮ ಅಪಘಾತ ಸಂಭವಿಸಿದ ಸ್ಥಳದಲ್ಲಿ ವಿಲಕ್ಷಣ ಭಯಂಕರ ದೃಶ್ಯಗಳು ರಾಚುತ್ತಿದ್ದವು. ಒಂದು ಪ್ರಬಲ ಚಂಡಮಾರುತವು ಬೋಗಿಗಳಿಗೆ ಅಪ್ಪಳಿಸಿ ಅವುಗಳನ್ನು ಒಂದರ ಮೇಲೊಂದು ಎಸೆಯಲಾಗಿದೆಯೇ ಎನ್ನುವ ರೀತಿಯಲ್ಲಿ ಘಟನಾ ಸ್ಥಳ ಕಾಣುತ್ತಿತ್ತು. ‘ಒಂದು ಪ್ರದೇಶದ ಮೂಲಕ ಹಲವು ಹಳಿಗಳು ಹಾಯ್ದುಹೋಗಿವೆ. ಹೀಗಾಗಿ ಅಪಘಾತದಿಂದಾಗಿ ಸಂತ್ರಸ್ತರಾದವರ ಸಂಖ್ಯೆ ಹೆಚ್ಚಿದೆ. ರಕ್ಷಣಾ ಕಾರ್ಯವೂ ಸವಾಲಾಗಿ ಪರಿಣಮಿಸಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಗೊಂಡವರನ್ನು ಆಸ್ಟತ್ರೆಗೆ ದಾಖಲಿಸಲಾಗುತ್ತಿದ್ದು ಬಾಲಸೋರ್ ಜಿಲ್ಲಾ ಆಸ್ಪತ್ರೆ ಮತ್ತು ಸೊರೊ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ಹೋಗಿವೆ. ಆಸ್ಟತ್ರೆಗಳ ಕೋಣೆಗಳಲ್ಲಿ ಜಾಗವಿಲ್ಲದೆ ಕಾರಿಡಾರ್ಗಳಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ. ‘ನಾನು ಕೆಲ ದಶಕಗಳಿಂದ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವೆ. ಆದರೆ ಈ ರೀತಿಯ ಸಂಪೂರ್ಣ ಅಸ್ತವ್ಯಸ್ತ ಸ್ಥಿತಿಯನ್ನು ನನ್ನ ವೃತ್ತಿ ಜೀವನದಲ್ಲಿಯೇ ನೋಡಿಲ್ಲ’ ಎಂದು ಹೆಚ್ಚುವರಿ ಜಿಲ್ಲಾ ವೈದ್ಯಾಧಿಕಾರಿ ಡಾ.ಮೃತ್ಯುಂಜಯ ಮಿಶ್ರಾ ಹೇಳಿದರು. ‘ದಿಢೀರ್ನೆ 251ಕ್ಕೂ ಗಾಯಾಳುಗಳನ್ನು ಆಸ್ಪತ್ರೆಗೆ ತರಲಾಯಿತು. ನಮ್ಮಲ್ಲಿ ಸಿದ್ಧತೆಯೇ ಇರಲಿಲ್ಲ. ಆದಾಗ್ಯೂ ನಮ್ಮ ಸಿಬ್ಬಂದಿ ರಾತ್ರಿಯಿಡೀ ಪ್ರಾಥಮಿಕ ಚಿಕಿತ್ಸೆ ನೀಡಿದರು’ ಎಂದು ಹೇಳಿದರು. ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ– ಭುವನೇಶ್ವರದ ವೈದ್ಯರು ಬಾಲಸೋರ್ ಮತ್ತು ಕಟಕ್ಗೆ ತೆರಳಿ ಚಿಕಿತ್ಸೆಗೆ ನೆರವಾದರು. ಎರಡು ಸಾವಿರ ಜನರಿಂದ ರಕ್ತದಾನ! ಬಾಲಸೋರ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳಿಗಾಗಿ ರಕ್ತ ನೀಡಲು ಎರಡು ಸಾವಿರದಷ್ಟು ಜನರು ಜಮಾಯಿಸಿದ್ದರು. ಪೊಲೀಸರು ಸೇರಿದಂತೆ ಸ್ಥಳೀಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ ಕಾಳಜಿ ಮೆರೆದಿದ್ದಾರೆ. ‘ರಕ್ತದಾನ ಮಾಡಲು ಆಸ್ಪತ್ರೆಯ ಮುಂದೆ ಜಮಾಯಿಸಿದ್ದನ್ನು ಕಂಡು ಆಶ್ಚರ್ಯವಾಯಿತು. ದಾನಿಗಳಿಂದ 500 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಇದು ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ದೊಡ್ಡ ಅನುಭವ’ ಎಂದು ಡಾ.ಮೃತ್ಯುಂಜಯ ಮಿಶ್ರಾ ಹೇಳಿದರು.