ಈ ಮಸೂದೆಗೆ ಕೆಲವು ದಿನಗಳ ಹಿಂದೆ ಸಂಪುಟದಲ್ಲಿ ಅಂಗೀಕಾರ ನೀಡಲಾಗಿತ್ತು. ಆಗ ಪ್ರಧಾನಿಯವರು ವಿಸ್ತೃತ ಚರ್ಚೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕು ಎಂದು ಹೇಳಿದ್ದರು. ಜೆಪಿಸಿಯಲ್ಲಿ ವಿವರವಾದ ಚರ್ಚೆಗಳು ನಡೆಯಲಿವೆ. ಜೆಪಿಸಿಯ ವರದಿಯನ್ನು ಸಂಪುಟ ಅನುಮೋದಿಸುತ್ತದೆ. ಮತ್ತೆ ಸದನದಲ್ಲಿ ಮಸೂದೆ ಬಗ್ಗೆ ಚರ್ಚೆ ನಡೆಯಲಿದೆ–ಅಮಿತ್ ಶಾ, ಕೇಂದ್ರ ಗೃಹ ಸಚಿವ
ಈ ಮಸೂದೆ ಸಂವಿಧಾನ ಹಾಗೂ ದೇಶದ ನಾಗರಿಕರ ಮತದಾನದ ಹಕ್ಕುಗಳಿಗೆ ವಿರುದ್ಧವಾಗಿದೆ. ಈ ಮಸೂದೆ ಚುನಾವಣಾ ಆಯೋಗಕ್ಕೆ ಅಸಾಂವಿಧಾನಿಕ ಅಧಿಕಾರ ನೀಡುತ್ತದ. ಚುನಾವಣೆ ನಡೆಸಲು ರಾಷ್ಟ್ರಪತಿ ಅವರಿಗೆ ಸಲಹೆ ನೀಡುವ ಅಧಿಕಾರವನ್ನು ಆಯೋಗಕ್ಕೆ ನೀಡಲಾಗಿದೆ–ಗೌರವ್ ಗೊಗೊಯ್, ಲೋಕಸಭೆಯ ವಿರೋಧ ಪಕ್ಷದ ಉಪನಾಯಕ
ಈ ಮಸೂದೆಗಳು ಮೂಲಭೂತ ರಚನೆಯ ಸಿದ್ಧಾಂತದ ಮೇಲೆ ದಾಳಿ ಮಾಡಿಲ್ಲ. ಸಂಸತ್ತಿನ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲ. ನ್ಯಾಯಾಂಗ ಪರಾಮರ್ಶೆ, ಸಂವಿಧಾನದ ಒಕ್ಕೂಟ ಸ್ವರೂಪ, ಜಾತ್ಯತೀತ ಗುಣ, ಸಂವಿಧಾನದ ಪರಮಾಧಿಕಾರದಂತಹ ತತ್ವಗಳ ಬದಲಾವಣೆ ಆಗುವುದಿಲ್ಲ. ರಾಜಕೀಯದ ಕಾರಣದಿಂದ ವಿಪಕ್ಷಗಳ ಸದಸ್ಯರು ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ.–ಅರ್ಜುನ್ ರಾಮ್ ಮೇಘವಾಲ್, ಕಾನೂನು ಸಚಿವ
ಮಸೂದೆಗಳು ಸರ್ವಾಧಿಕಾರ ತರುವ ಪ್ರಯತ್ನ. ಈ ಕ್ರಮವು ಸಂವಿಧಾನ ವಿರೋಧಿ, ಒಕ್ಕೂಟ ವ್ಯವಸ್ಥೆಯ ವಿರೋಧಿ, ಬಡವರು, ಹಿಂದುಳಿದವರು ಮತ್ತು ಮುಸ್ಲಿಂ ವಿರೋಧಿ.–ಧರ್ಮೇಂದ್ರ ಯಾದವ್, ಸಮಾಜವಾದಿ ಪಕ್ಷ
ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ಅಥವಾ ಸಂಸತ್ತಿಗೆ ಅಧೀನವಾಗಿಲ್ಲ. ಇದು ಚುನಾವಣಾ ಸುಧಾರಣೆ ಅಲ್ಲ. ಇದು ಕೇವಲ ಒಬ್ಬ ವ್ಯಕ್ತಿಯ ಆಕಾಂಕ್ಷೆಗಳಿಗೆ ಅನುಗುಣವಾಗಿದೆ.–ಕಲ್ಯಾಣ್ ಬ್ಯಾನರ್ಜಿ, ಟಿಎಂಸಿ
ಈ ಮಸೂದೆಯು ಅಧ್ಯಕ್ಷೀಯ ವ್ಯವಸ್ಥೆಯನ್ನು ಪರಿಚಯಿಸುತ್ತದೆ. ರಾಜಕೀಯ ಲಾಭದ ಗುರಿಯನ್ನಷ್ಟೇ ಹೊಂದಿದೆ. ಇದು ಜಾರಿಯಾದರೆ ಪ್ರಾದೇಶಿಕ ಪಕ್ಷಗಳು ನಾಶವಾಗಲಿವೆ. ಇದೊಂದು ಕರಾಳ ಮಸೂದೆ.–ಅಸಾದುದ್ದೀನ್ ಒವೈಸಿ, ಎಐಎಂಐಎಂ
ಸರ್ಕಾರಕ್ಕೆ ಮೂರನೇ ಎರಡರಷ್ಟು ಬಹುಮತವಿಲ್ಲ. ಐದು ವರ್ಷ ಅವಧಿಗೆ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಮತದಾರರಿಗೆ ಇದೆ. ಈ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ಹೆಚ್ಚಿನ ಪರಾಮರ್ಶೆಗೆ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಬೇಕು.–ಟಿ.ಆರ್.ಬಾಲು, ಡಿಎಂಕೆ
ಲೋಕಸಭೆಯೊಂದಿಗೆ ನಿರ್ದಿಷ್ಟ ರಾಜ್ಯಕ್ಕೆ ಚುನಾವಣೆ ನಡೆಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡುವುದು ಸರಿಯಲ್ಲ.–ಅನಿಲ್ ದೇಸಾಯಿ, ಶಿವಸೇನಾ (ಯುಬಿಟಿ)
ಈ ಮಸೂದೆಗಳು ದೇಶದಲ್ಲಿ ಸರ್ವಾಧಿಕಾರಕ್ಕೆ ಕಾರಣವಾಗುತ್ತವೆ.–ಅಮ್ರಾ ರಾಮ್, ಸಿಪಿಎಂ
ವಿಧಾನಸಭೆಗಳನ್ನು ವಿಸರ್ಜಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ನೀಡುವುದು ತರವಲ್ಲ. ಮಸೂದೆ ಮಂಡಿಸಿದರೂ ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು.–ಸುಪ್ರಿಯಾ ಸುಳೆ, ಎನ್ಸಿಪಿ (ಶರದ್ ಪವಾರ್ ಬಣ)
ಮಸೂದೆಯು ಅಸ್ಪಷ್ಟ. 2029ರ ನಂತರ 17 ವಿಧಾನಸಭೆ ಗಳಿಗೆ ಚುನಾವಣೆಗಳು ನಡೆಯಲಿವೆ. ಒಂದು ವೇಳೆ ಮಸೂದೆ ಅಂಗೀಕರಿಸಿದರೆ ಅವುಗಳ ಅಧಿಕಾರಾವಧಿ ಮೊಟಕುಗೊಳ್ಳಲಿದೆ.–ಎನ್.ಕೆ. ಪ್ರೇಮಚಂದ್ರನ್, ಆರ್ಎಸ್ಪಿ
ಕಳೆದ ಆರು ತಿಂಗಳಿಂದ ವಿಪಕ್ಷಗಳು ಅದರಲ್ಲೂ ಕಾಂಗ್ರೆಸ್ ಪ್ರತಿ ಸುಧಾರಣೆಯನ್ನೂ ಅಸಾಂವಿಧಾನಿಕ ಎಂದು ಬಿಂಬಿಸುತ್ತಿದೆ. ವಿಪಕ್ಷಗಳಿಗೆ ಸುಧಾರಣೆಗಳೆಂದರೆ ಅಲರ್ಜಿ.–ಶ್ರೀಕಾಂತ್ ಶಿಂದೆ, ಶಿವಸೇನಾ
ಏಕಕಾಲದಲ್ಲಿ ಚುನಾವಣೆ ನಡೆಸುವ ಮಸೂದೆಗೆ ಪಕ್ಷದ ಬೆಂಬಲ ಇದೆ. ಇದರಿಂದ ಚುನಾವಣಾ ವೆಚ್ಚ ಕಡಿಮೆಯಾಗಲಿದೆ.–ಚಂದ್ರಶೇಖರ್ ಪೆಮ್ಮಸಾನಿ, ಕೇಂದ್ರ ಸಚಿವ (ಟಿಡಿಪಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.