ನವದೆಹಲಿ: ಉದ್ಯೋಗ ನೇಮಕಾತಿಗೆ ಆನ್ಲೈನ್ ಪ್ರವೇಶ ಪರೀಕ್ಷೆ ಹಾಗೂ ಕೇಂದ್ರ ಸರ್ಕಾರಿ ನೌಕರರ ಕೌಶಲ ವೃದ್ಧಿಗೆ ಮಿಷನ್ ಕರ್ಮಯೋಗಿ ಯೋಜನೆ ಜಾರಿಗೆ ಕೇಂದ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯವು 2020ರಲ್ಲಿ ಕೈಗೊಂಡಿರುವ ಪ್ರಮುಖ ತೀರ್ಮಾನಗಳು.
ಕೋವಿಡ್ ಸ್ಥಿತಿಯ ನಡುವೆಯೂ ಸಚಿವಾಲಯವು ಕೇಂದ್ರದ ಎಲ್ಲ ಕಚೇರಿಗಳಲ್ಲಿ ಸುಗಮ ಆಡಳಿತಕ್ಕಾಗಿ ಹಾಗೂ 48 ಲಕ್ಷ ನೌಕರರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಸಚಿವಾಲಯವು ಸಕಾಲದಲ್ಲಿ ಕೈಗೊಂಡಿತ್ತು.
ಸೋಂಕು ತಡೆ ಕ್ರಮವಾಗಿ ಮನೆಯಿಂದಲೇ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರದ ಸಂಸ್ಥೆಗಳು ನಿಗದಿಯಂತೆ ಕಾರ್ಯನಿರ್ವಹಿಸಲು ಕ್ರಮವಹಿಸಲಾಯಿತು. ನಿವೃತ್ತ ನೌಕರರು ಪಿಂಚಣಿ ಪಡೆಯಲು ಅಗತ್ಯ ಪ್ರಮಾಣಪತ್ರ ಸಲ್ಲಿಸಲು ಅನುವಾಗುವಂತೆ ವಿವಿಧ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು.
ಅಲ್ಲದೆ, ನವೆಂಬರ್ ತಿಂಗಳಲ್ಲಿ ಆನ್ಲೈನ್ ಮೂಲಕವೇ ಪ್ರಮಾಣಪತ್ರ ಸಲ್ಲಿಸುವ ನಿವೃತ್ತರಿಗೆ ಮನೆ ಬಾಗಿಲಿನಲ್ಲಿಯೇ ಪೋಸ್ಟ್ಮನ್ ಮೂಲಕ ಸೌಲಭ್ಯ ತಲುಪಿಸುವ ವ್ಯವಸ್ಥೆ ಜಾರಿಗೊಳಿಸಲಾಯಿತು.
ಕೋವಿಡ್ ಪರಿಸ್ಥಿತಿಯಲ್ಲಿ ಮನೆಯಲ್ಲಿಯೇ ಇರಬೇಕಾದ ಸ್ಥಿತಿಯಲ್ಲಿ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿದ್ದ ಪಿಂಚಣಿದಾರರಿಗೆ ಈ ಕ್ರಮವು ದೊಡ್ಡ ನಿರಾಳಭಾವವನ್ನು ನೀಡಿತ್ತು ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.