ಶ್ರೀನಗರ: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದ ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನ ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಶೆಲ್ ದಾಳಿ ನಡೆಸಿದೆ.
ಗಡಿ ನಿಯಂತ್ರಣ ರೇಖೆ ಬಳಿ ಇರುವ ಝುಲ್ಲಾಸ್ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 10.30ಕ್ಕೆ ಪಾಕಿಸ್ತಾನದ ಸೇನೆನಡೆಸಿದ ಶೆಲ್ ದಾಳಿಯಲ್ಲಿ ಒಂದೇ ಕುಟುಂಬದ ಇಬ್ಬರು ಪುಟ್ಟ ಮಕ್ಕಳು ಮತ್ತು ಮಕ್ಕಳ ತಾಯಿ ಸಾವಿಗೀಡಾಗಿದ್ದಾರೆ.
ಸಾವಿಗೀಡಾದವರು ರುಬೀನಾ ಕೌಸೇರ್ (26), ಮೊಹಮ್ಮದ್ ಶಬ್ನಂ (4) ಮತ್ತು ಶಾಜಿಯಾ ಕೌಸರ್ (3).ರುಬೀನಾ ಕೌಸರ್ ಅವರ ಪತಿಮೊಹಮ್ಮದ್ ಯೂನಿಸ್ ಎಂಬವರಿಗೆ ಗಂಭೀರ ಗಾಯಗಳಾಗಿದೆ ಎಂದು ಪೂಂಚ್ ಎಸ್ಎಸ್ಪಿ ರಮೇಶ್ ಅಂಗ್ರಾಲ್ ಹೇಳಿದ್ದಾರೆ.
ಗುರುವಾರ ನಡೆದ ಶೆಲ್ ದಾಳಿಯಲ್ಲಿ 27ರ ಹರೆಯದ ಅಮೀನಾ ಅಖ್ತರ್ ಎಂಬವರು ಸಾವಿಗೀಡಾಗಿದ್ದು, ಜಕೀರ್ ಹುಸೇನ್ ಎಂಬ ಯೋಧನಿಗೆ ಗಾಯಗಳಾಗಿತ್ತು.