ನವದೆಹಲಿ: ‘ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ–2023’ ಅನ್ನು ರಾಜ್ಯಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.
ಮಣಿಪುರದಲ್ಲಿನ ಪರಿಸ್ಥಿತಿ ವಿಚಾರವಾಗಿ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದ ನಂತರ ಧ್ವನಿಮತದ ಮೇಲೆ ಮಸೂದೆಯನ್ನು ಅಂಗೀಕರಿಸಲಾಯಿತು.
‘ಖಾಸಗಿತನ ಹಕ್ಕ’ನ್ನು ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್ ಘೋಷಿಸಿದ ಆರು ವರ್ಷಗಳ ನಂತರ ಈ ಕುರಿತ ಮಸೂದೆಯನ್ನು ಮಂಡಿಸಿ, ಅಂಗೀಕಾರ ಪಡೆದಂತಾಗಿದೆ. ಆನ್ಲೈನ್ ವೇದಿಕೆಗಳಲ್ಲಿ ಜನರ ವೈಯಕ್ತಿಕ ದತ್ತಾಂಶ ದುರ್ಬಳಕೆಯಾಗುವುದನ್ನು ತಡೆಯುವ ಅವಕಾಶಗಳನ್ನು ಈ ಮಸೂದೆ ಒಳಗೊಂಡಿದೆ.
ಇದಕ್ಕೂ ಮುನ್ನ ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್, ‘ಮಸೂದೆ ಕುರಿತು ವಿರೋಧ ಪಕ್ಷಗಳು ಚರ್ಚೆ ನಡೆಸಬೇಕಿತ್ತು. ನಾಗರಿಕರ ಹಕ್ಕುಗಳ ಬಗ್ಗೆ ವಿಪಕ್ಷಗಳ ಯಾವುದೇ ನಾಯಕ ಅಥವಾ ಸದಸ್ಯರಿಗೆ ಕಾಳಜಿ ಇಲ್ಲ’ ಎಂದರು.
ಅಂಗೀಕಾರ: ದೇಶದ ವಿಶ್ವವಿದ್ಯಾಲಯಗಳಲ್ಲಿ ಕೈಗೊಳ್ಳುವ ಸಂಶೋಧನೆಗೆ ಅನುದಾನ ಒದಗಿಸುವ ಸಂಸ್ಥೆಯೊಂದರ ಸ್ಥಾಪನೆ ಸೇರಿದಂತೆ ಮಹತ್ವದ ಅವಕಾಶಗಳನ್ನು ಒಳಗೊಂಡಿರುವ ‘ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ–2023’ ಅನ್ನು ಕೂಡ ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು.
ಸಚಿವ ಜಿತೇಂದ್ರ ಸಿಂಗ್ ಮಸೂದೆ ಮಂಡಿಸಿದರು. ವಿಪಕ್ಷಗಳ ಸದಸ್ಯರು ಅದಾಗಲೇ ಸಭಾತ್ಯಾಗ ಮಾಡಿದ್ದರಿಂದಾಗಿ, ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.
ಈ ಎರಡೂ ಮಸೂದೆಗಳನ್ನು ಲೋಕಸಭೆಯಲ್ಲಿ ಸೋಮವಾರ ಅಂಗೀಕರಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.