ಹೈದರಾಬಾದ್: ಲೋಕಸಭಾ ಚುನಾವಣೆಯಲ್ಲಿ ಜನ ‘ಮೋದಿ ಗ್ಯಾರಂಟಿ’ಯನ್ನು ತಿರಸ್ಕರಿಸಿದ್ದಾರೆ ಎಂದಿರುವ ತೆಲಂಗಾಣದ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆ ತ್ಯಜಿಸಬೇಕು ಎಂದು ಬುಧವಾರ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಚುನಾವಣೆಯಲ್ಲಿ ಎನ್ಡಿಎ ‘ಮೋದಿ ಗ್ಯಾರಂಟಿ’ ಸುತ್ತ ಪ್ರಚಾರ ನಡೆಸಿತು. ಬಿಜೆಪಿಯ ಸ್ಥಾನಗಳು 303ರಿಂದ 240ಕ್ಕೆ ಕುಸಿದಿವೆ. ಅಂದರೆ, ಜನ ಮೋದಿ ಗ್ಯಾರಂಟಿಯನ್ನು ತಿರಸ್ಕರಿಸಿದ್ದಾರೆ ಎಂದು ಅರ್ಥ’ ಎಂದು ಹೇಳಿದರು.
ಚುನಾವಣೆಯಲ್ಲಿ ಬಿಜೆಪಿ ಮತ ಪ್ರಮಾಣಕ್ಕೆ ಕಾಂಗ್ರೆಸ್ ಮತ ಪ್ರಮಾಣ ತೀರಾ ಹತ್ತಿರವಿದೆ ಎಂದು ಪ್ರತಿಪಾದಿಸಿದ ಅವರು, ‘ಉತ್ತರ ಪ್ರದೇಶದ ಫೈಜಾಬಾದ್ ಕ್ಷೇತ್ರದಲ್ಲಿ ರಾಮನ ಹೆಸರಿನಲ್ಲಿ ಮತ ಭಿಕ್ಷೆ ಬೇಡಿದ ಬಿಜೆಪಿಗೆ ದೇವರು ಸರಿಯಾಗಿ ಬುದ್ಧಿ ಕಲಿಸಿದ್ದಾನೆ’ ಎಂದು ಅಭಿಪ್ರಾಯಪಟ್ಟರು.