ತಿರುವನಂತಪುರ: ‘ಜೆಕ್ ಗಣರಾಜ್ಯದಲ್ಲಿ, ತ್ರಿವರ್ಣದ ಹಿನ್ನೆಲೆಯಲ್ಲಿ ಮಹಾತ್ಮಗಾಂಧಿ ಅವರ ರೇಖಾಚಿತ್ರವನ್ನು ಒಳಗೊಂಡು ಅವರ ಹೆಸರಿನಲ್ಲಿಯೇ ಬಿಡುಗಡೆ ಮಾಡಿರುವ ಬಿಯರ್ ಉತ್ಪನ್ನವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು’ ಎಂದು ಸ್ಥಳೀಯ ಸಂಘಟನೆಯೊಂದು ಜೆಕ್ ಗಣರಾಜ್ಯದ ಕಂಪನಿಗೆ ಆಗ್ರಹಪಡಿಸಿದೆ.
ಕಳೆದ ವಾರ ಇಸ್ರೇಲ್ ಮೂಲದ ಕಂಪನಿಯೊಂದು ಬಿಯರ್ ಬಾಟಲಿಗಳ ಮೇಲೆ ಮಹಾತ್ಮಾಗಾಂಧಿ ಅವರ ಚಿತ್ರವನ್ನು ಮುದ್ರಿಸಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿಂದೆಯೇ ತನ್ನ ಕೃತ್ಯಕ್ಕಾಗಿ ಕ್ಷಮೆಯನ್ನು ಕೋರಿತ್ತು.
ಜೆಕ್ ಗಣರಾಜ್ಯದ ಕಂಪನಿ ಕೃತ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿರುವಕೇರಳ ಮೂಲದ ಮಹಾತ್ಮಗಾಂಧಿ ರಾಷ್ಟ್ರೀಯ ಪ್ರತಿಷ್ಠಾನವು ಸೋಮವಾರ ಅಲ್ಲಿನ ಸರ್ಕಾರ, ಭಾರತದಲ್ಲಿ ಇರುವ ಜೆಕ್ ಗಣರಾಜ್ಯದ ರಾಯಭಾರ ಕಚೇರಿಗೆ ಪತ್ರವನ್ನು ಬರೆದಿದೆ. ರಾಷ್ಟ್ರಪತಿ, ಪ್ರಧಾನಿ ಅವರಿಗೂ ಈ ಸಂಬಂಧ ಈ ಸಂಬಂಧ ಪತ್ರವನ್ನು ಬರೆದಿದೆ.
‘ಇದೊಂದು ಅಗೌರವ ಮತ್ತು ಅಪಮಾನಗೊಳಿಸುವ ಕೃತ್ಯ. ಕೂಡಲೇ ಬಿಯರ್ ಉತ್ಪನ್ನ ವಾಪಸು ತೆಗೆದುಕೊಳ್ಳಬೇಕು ಎಂದು ಆಗ್ರಹಪಡಿಸಿದೆ. ‘ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಜೆಕ್ ಗಣರಾಜ್ಯದ ರಾಯಭಾರ ಕಚೇರಿ ಉತ್ತರಿಸಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಬಿ ಜೆ. ಜೋಸ್ ಅವರು ತಿಳಿಸಿದರು.