ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಷ್ಟೀಕರಣದ ಬದಲು ಸಂತುಷ್ಟೀಕರಣ ಸಂಕಲ್ಪ: ಪ್ರಧಾನಿ ನರೇಂದ್ರ ಮೋದಿ

Published 27 ಜೂನ್ 2023, 11:13 IST
Last Updated 27 ಜೂನ್ 2023, 11:13 IST
ಅಕ್ಷರ ಗಾತ್ರ

ಭೋಪಾಲ್: ‘ಏಕರೂಪ ನಾಗರಿಕ ಸಂಹಿತೆಯನ್ನು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದರೂ, ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಪಕ್ಷಗಳು ಅದನ್ನು ವಿರೋಧಿಸುತ್ತಿರುವುದು ಆಘಾತಕಾರಿ. ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದರು.

ಬೂತ್ ಮಟ್ಟದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ದೇಶದ ಪ್ರಮುಖ ಬೂತ್‌ಗಳ ಕಾರ್ಯಕರ್ತರಿಗಾಗಿ ಮಂಗಳವಾರ ಆಯೋಜಿಸಿದ್ದ ‘ಮೇರಾ ಬೂತ್ ಸಬ್ಸೆ ಮಜ್ಬೂತ್‘ ಸಮಾವೇಶದಲ್ಲಿ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.

‘ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದರಿಂದಲೇ ಬಡ ಮುಸ್ಲಿಮರು ಇಂದಿಗೂ ಅದೇ ಸ್ಥಿತಿಯಲ್ಲೇ ಬದುಕುತ್ತಿದ್ದಾರೆ. ಆದರೆ ಮತಕ್ಕಾಗಿ ಯಾರನ್ನೂ ಓಲೈಸುವುದಿಲ್ಲ ಎಂಬ ಸಂಕಲ್ಪವನ್ನು ಬಿಜೆಪಿ ಮಾಡಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು ತುಷ್ಟೀಕರಣದ ಬದಲು ಸಂತುಷ್ಟೀಕರಣ ಎಂಬ ಸಂಕಲ್ಪವನ್ನು ತೊಡಬೇಕು’ ಎಂದರು.

‘ಮುಸ್ಲಿಮರು ಈ ವಿಷಯದಲ್ಲಿ ಹೆಚ್ಚು ಆಲೋಚಿಸುವ ಅಗತ್ಯವಿದೆ. ಮತಕ್ಕಾಗಿ ಯಾವೆಲ್ಲಾ ಪಕ್ಷಗಳು ತಮ್ಮನ್ನು ಪ್ರಚೋದಿಸಿ, ರಾಜಕೀಯವಾಗಿ ಬಳಸಿಕೊಂಡಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಒಂದೊಮ್ಮೆ ನಿಮ್ಮ ಪುತ್ರರು, ಪುತ್ರಿಯರು ಹಾಗೂ ಮೊಮ್ಮಕ್ಕಳ ಏಳಿಗೆಯನ್ನು ಬಯಸಿದ್ದರೆ, ಬಿಜೆಪಿಗೆ ಮತ ಹಾಕಿ. ಆದರೆ ಕುಟುಂಬ ರಾಜಕಾರಣ ಮಾಡುವವರನ್ನು ದೂರವಿಡಿ’ ಎಂದು ವಿರೋಧ ಪಕ್ಷಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಉತ್ತರಪ್ರದೇಶ, ಬಿಹಾರ, ದಕ್ಷಿಣ ಭಾರತದ ಕೇರಳ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಇಂದಿಗೂ ಜಾತಿ ಹೆಸರಿನಲ್ಲಿ ಬಹಳಷ್ಟು ಸಮುದಾಯಗಳು ಅಭಿವೃದ್ಧಿಯಿಂದ ಹಿಂದೆ ಉಳಿದಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಮರೇ ಹೆಚ್ಚಿರುವ ಉತ್ತರ ಪ್ರದೇಶದ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಪಡೆದಿದೆ. 2024ರಲ್ಲೂ ಎಲ್ಲರನ್ನೂ ಒಳಗೊಂಡು ಉತ್ತಮ ಸ್ಥಾನವನ್ನು ಕಾಯ್ದುಕೊಳ್ಳುವುದು ಪಕ್ಷದ ಗುರಿ’ ಎಂದು ಮೋದಿ ಹೇಳಿದರು.

ವಿರೋಧ ಪಕ್ಷಗಳಿಂದ ₹20ಲಕ್ಷ ಕೋಟಿ ಹಗರಣಗಳ ‘ಗ್ಯಾರಂಟಿ’

’2024ರಲ್ಲೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ತರುವ ಸಂಕಲ್ಪವನ್ನು ಜನರು ಮಾಡಿದ್ದಾರೆ. ಆದರೆ ‘ಗ್ಯಾರಂಟಿ’ ಬಗ್ಗೆ ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷದವರು ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಈ ಕುರಿತು ಜನರಿಗೆ ಸತ್ಯವನ್ನು ಹೇಳಬೇಕಿದೆ. ವಿರೋಧ ಪಕ್ಷಗಳು ಈ ಘೋಷಣೆ ಸುಮಾರು ₹20ಲಕ್ಷ ಕೋಟಿ ಮೊತ್ತದ ಹಗರಣಗಳ ಗ್ಯಾರೆಂಟಿ ಎಂಬುದನ್ನು ಜನರಿಗೆ ಮನದಟ್ಟು ಮಾಡಬೇಕಿದೆ. ಆದರೆ ಇಂಥ ಹಗರಣಗಳನ್ನು ನಮ್ಮ ಸರ್ಕಾರ ಬಯಲಿಗೆಳೆಯಲಿದೆ ಎಂಬ ಗ್ಯಾರಂಟಿಯನ್ನು ನೀಡುತ್ತದೆ’ ಎಂದು ಭರವಸೆ ನೀಡಿದರು.

‘ತ್ರಿವಳಿ ತಲಾಕ್ ಪದ್ಧತಿ ರದ್ಧತಿ ಮೂಲಕ ಮುಸ್ಲಿಂ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಈಜಿಪ್ಟ್‌ನಲ್ಲಿ 90 ವರ್ಷಗಳ ಹಿಂದೆಯೇ ತ್ರಿವಳಿ ತಲಾಕ್‌ ತೆಗೆದುಹಾಕಲಾಗಿದೆ. ಪಾಕಿಸ್ತಾನ, ಕತಾರ್‌, ಜೋರ್ಡಾನ್, ಇಂಡೊನೇಷಿಯಾ ಈ ಕಾನೂನು ಇಲ್ಲ. ಹಾಗಿದ್ದರೆ ಮುಸ್ಲಿಂ ರಾಷ್ಟ್ರಗಳಿಗೇ ಬೇಡವಾದ್ದು ನಮ್ಮ ದೇಶದ ಮುಸ್ಲಿಂ ಮಹಿಳೆಯರಿಗೆ ಏಕೆ ಬೇಕು? ತ್ರಿವಳಿ ತಲಾಕ್‌ನಿಂದ ಬಹಳಷ್ಟು ಕುಟುಂಬಗಳೇ ನಾಶವಾದ ಉದಾಹರಣೆಗಳಿವೆ’ ಎಂದು ಮೋದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT