ತಿರುವನಂತಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಕೇರಳದಲ್ಲಿ ಎರಡಂಕಿಯ ಸ್ಥಾನಗಳನ್ನು ಗಳಿಸಲಿದೆ ಎಂಬ ಮಹತ್ವಾಕಾಂಕ್ಷೆಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಇಲ್ಲಿನ ಸಂಸದ ಶಶಿ ತರೂರ್ ಮೂದಲಿಸಿದ್ದಾರೆ.
'ಕೇಸರಿ ಪಕ್ಷವು ದಕ್ಷಿಣ ಭಾರತದ ರಾಜ್ಯದಲ್ಲಿ ಅಂತಹ ಸಾಧನೆ ಮಾಡಲು ಇರುವ ಏಕೈಕ ಮಾರ್ಗವೆಂದರೆ ಎರಡು ಸೊನ್ನೆಗಳನ್ನು ಪಡೆಯುವುದು. ಇಲ್ಲವಾದರೆ ಕೇರಳದಲ್ಲಿ ಬಿಜೆಪಿಗೆ ಸಿಗುವುದು ಒಂದಂಕಿಯಷ್ಟೇ. ಅದು ಒಂದು ಸೊನ್ನೆ' ಎಂದು ಕಾಲೆಳೆದಿದ್ದಾರೆ.
ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕನರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ನೃತೃತ್ವದಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಯಾತ್ರೆಯ ಭಾಗವಾಗಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದ ತರೂರ್, ನಂತರ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಮಂಗಳವಾರ ಕೇರಳಕ್ಕೆ ಭೇಟಿ ನೀಡಿದ್ದ ಪ್ರಧಾನಿ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ಎರಡಂಕಿಯಷ್ಟು ಸ್ಥಾನಗಳನ್ನು ನೀಡಿ ಆಶೀರ್ವಾದ ಮಾಡಿ ಎಂದು ಜನರಿಗೆ ಮನವಿ ಮಾಡಿದ್ದರು.
ಈ ಕುರಿತು ಮಾತನಾಡಿರುವ ತರೂರ್, ಕೇರಳ ಹಾಗೂ ಅದರ ಸಂಸ್ಕೃತಿ ಅಥವಾ ಇತಿಹಾಸವನ್ನು ಅರ್ಥಮಾಡಿಕೊಳ್ಳದಿರುವುದೇ ಬಿಜೆಪಿಯ ಸಮಸ್ಯೆ ಎಂದು ಹೇಳಿದ್ದಾರೆ.