ನಾಗ್ಪುರ (ಪಿಟಿಐ):ಅಮೆರಿಕದ ಷಿಕಾಗೊದಲ್ಲಿ ನಡೆದ ವಿಶ್ವ ಹಿಂದೂ ಸಮಾವೇಶದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆಯನ್ನು ಭಾರಿಪ ಬಹುಜನ ಮಹಾಸಂಘದ ನಾಯಕ ಪ್ರಕಾಶ್ ಅಂಬೇಡ್ಕರ್ ಖಂಡಿಸಿದ್ದಾರೆ.
‘ಸಿಂಹ ಒಂಟಿಯಾಗಿದ್ದರೆ ಕಾಡುನಾಯಿಗಳೆಲ್ಲ ದಾಳಿ ಮಾಡುತ್ತವೆ ಮತ್ತು ಸಿಂಹವನ್ನು ಕೊಂದೇ ಬಿಡುತ್ತವೆ. ಇದನ್ನು ನಾವು ಮರೆಯಬಾರದು’ ಎಂದು ಸಮಾವೇಶದಲ್ಲಿ ಭಾಗವತ್ ಹೇಳಿದ್ದರು.
‘ದೇಶದಲ್ಲಿನ ವಿರೋಧಪಕ್ಷಗಳನ್ನು ಭಾಗವತ್ನಾಯಿಗಳಿಗೆ ಹೋಲಿಸಿದ್ದಾರೆ. ಅವರ ಈ ಮನಸ್ಥಿತಿಯನ್ನು ನಾನು ಖಂಡಿಸುತ್ತೇನೆ. ಆರ್ಎಸ್ಎಸ್ ಸದಸ್ಯರು ಇಂಥ ಮನೋಭಾವ ಹೊಂದಿದ್ದರಿಂದಲೇ 1949ರಲ್ಲಿ ಆಗಿನ ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು, ಅವರನ್ನು ಜೈಲಿಗೆ ಅಟ್ಟಿದ್ದರು’ ಎಂದು ಹೇಳಿದ್ದಾರೆ.
‘ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಹೋಗುತ್ತವೆ. ಆದರೆ, ಆಡಳಿತಾರೂಢ ಪಕ್ಷದ ವಿರುದ್ಧ ವಿರೋಧಪಕ್ಷಗಳು ಹೋರಾಟ ನಡೆಸಲೇಬಾರದು ಎಂಬ ಮನಸ್ಥಿತಿಯನ್ನು ಇವರು ಹೊಂದಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ಅಂಬೇಡ್ಕರ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಆರ್ಎಸ್ಎಸ್ ಅನ್ನು ‘ಹಿಂದೂ ವಿರೋಧಿ’ ಎಂದು ಟೀಕಿಸಿವೆ. ಎನ್ಸಿಪಿ ವಕ್ತಾರ ನವಾಬ್ ಮಲ್ಲಿಕ್, ‘ಆರ್ಎಸ್ಎಸ್ ಮತ್ತು ಬಿಜೆಪಿ ಹಿಂದೂ ವಿರೋಧಿ ನಿಲುವು ಹೊಂದಿವೆ ಮತ್ತು ಅವುಗಳಿಗೆ ಜಾತಿ ರಾಜಕೀಯ ಯಾವ ರೀತಿ ಮಾಡಬೇಕು ಎಂಬುದು ಮಾತ್ರ ತಿಳಿದಿದೆ’ ಎಂದು ಟೀಕಿಸಿದ್ದಾರೆ.
‘ಜಾತಿಯ ಆಧಾರದ ಮೇಲೆ ಹಿಂದೂಗಳನ್ನು ಒಡೆಯುವುದನ್ನು ಅವರು ಯಾವಾಗ ನಿಲ್ಲಿಸುತ್ತಾರೋ, ಆಗ ಪ್ರತಿಯೊಬ್ಬ ಹಿಂದೂ ಮತ್ತು ಇತರೆ ಧರ್ಮಗಳ ಜನರೂ ಸಿಂಹಗಳಾಗುವರು’ ಎಂದು ಮಲ್ಲಿಕ್ ಹೇಳಿದ್ದಾರೆ.