ಚಂಡೀಗಡ: ಕೇಂದ್ರದ ಹೊಸ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಶನಿವಾರಹರಿಯಾಣದಲ್ಲಿ ಕುಂಡ್ಲಿ– ಮನೇಸರ್– ಪಾಲ್ವಾಲ್ (ಕೆಎಂಪಿ) ತಡೆರಹಿತ ಹೆದ್ದಾರಿಯನ್ನು ಅಲ್ಲಲ್ಲಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪೆರಿಫೆರಲ್ ಎಕ್ಸ್ಪ್ರೆಸ್ ವೇ ಎಂದೂ ಕರೆಯುವ 136 ಕಿ.ಮೀ ಉದ್ದದ ತಡೆರಹಿತ ಹೆದ್ದಾರಿಯನ್ನು ಪ್ರತಿಭಟನಕಾರರು ಬೆಳಿಗ್ಗೆ 8 ಗಂಟೆಯಿಂದಲೇ ಬಂದ್ ಮಾಡಿದ್ದು, ಈ ಬಂದ್ 24 ತಾಸು ಮುಂದುವರಿಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಲಖೋವಾಲ್) ಪ್ರಧಾನ ಕಾರ್ಯದರ್ಶಿ ಹರಿಂದರ್ ಸಿಂಗ್ ಲಖೋವಾಲ್ ಹೇಳಿದ್ದಾರೆ.
ಕೇಂದ್ರದ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಆಂದೋಲನ ನಡೆಸುತ್ತಿರುವ ರೈತ ಸಂಘಟನೆಗಳ ನೇತೃತ್ವ ವಹಿಸಿರುವ ಸಂಯುಕ್ತಾ ಕಿಸಾನ್ ಮೋರ್ಚಾ, ಕೆಎಂಪಿ ಎಕ್ಸ್ಪ್ರೆಸ್ ಹೆದ್ದಾರಿಯನ್ನು 24 ಗಂಟೆಗಳ ಕಾಲ ಬಂದ್ ಮಾಡಲು ಶುಕ್ರವಾರ ಕರೆ ನೀಡಿತ್ತು
ರಸ್ತೆ ಸಂಪೂರ್ಣ ಬಂದ್ ಮಾಡಿದ್ದರೂ, ತುರ್ತು ಸೇವೆಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಪ್ರತಿಭಟನಾ ರೈತರು ಹೇಳಿದ್ದಾರೆ.
ಪ್ರತಿಭಟನೆ ಕೈಬಿಡಲು ಕೇಂದ್ರದ ಮನವಿ ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರಿಗೆ ಮನವಿ ಮಾಡಿದ್ದಾರೆ.
‘ದೇಶದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ, ಪ್ರತಿಭಟನೆಯನ್ನು ಅಂತ್ಯಗೊಳಿಸಬೇಕು. ಸರ್ಕಾರ ಮಾತುಕತೆಗೆ ಸದಾ ಸಿದ್ಧವಿದೆ’ ಎಂದು ತಿಳಿಸಿದ್ದಾರೆ.
‘ನಮಗೆ ರೈತರ ಜೀವನ ಮುಖ್ಯ. ಇಡೀ ಜಗತ್ತು ಕೋವಿಡ್–19ಗೆ ಸಂಬಂಧಿಸಿದ ನಿಯಮಾವಳಿಗಳನ್ನು ಪಾಲಿಸುತ್ತಿದೆ. ಪ್ರತಿಭಟನೆ ನಡೆಸುತ್ತಿರುವ ರೈತರು ಸಹ ಪಾಲಿಸಬೇಕು’ ಎಂದು ತಿಳಿಸಿದ್ದಾರೆ.