ಪುಣೆ: ಪೋಶೆ ಕಾರು ಅಪಘಾತ ಪ್ರಕರಣ ಕುರಿತು ಬಾಲ ನ್ಯಾಯ ಮಂಡಳಿ (ಜೆಜೆಬಿ) ಸದಸ್ಯರ ನಡವಳಿಕೆ ಕುರಿತು ತನಿಖೆ ನಡೆಸಲು ತೀರ್ಮಾನಿಸಿರುವ ಮಹಾರಾಷ್ಟ್ರ ಸರ್ಕಾರ ಈ ಸಂಬಂಧ ಸಮಿತಿಯೊಂದನ್ನು ರಚಿಸಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
‘ಪೋಶೆ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಆದೇಶಗಳನ್ನು ನೀಡುವ ವೇಳೆ ಮಂಡಳಿಯಿಂದ ನಿಯಮಗಳ ಪಾಲನೆ ಆಗಿದೆಯೇ ಎಂಬ ಬಗ್ಗೆ ಸಮಿತಿ ಪರಿಶೀಲನೆ ನಡೆಸುವುದು’ ಎಂದು ತಿಳಿಸಿದ್ದಾರೆ.
ಐದು ಸದಸ್ಯರು ಇರುವ ಸಮಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಚಿಸಿದೆ. ಇಲಾಖೆಯಲ್ಲಿನ ಜಿಲ್ಲಾಧಿಕಾರಿ ಶ್ರೇಣಿ ಅಧಿಕಾರಿಯೊಬ್ಬರು ಅಧ್ಯಕ್ಷರಾಗಿರುವ ಸಮಿತಿಯು ಮುಂದಿನ ವಾರ ತನ್ನ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದೂ ಅಧಿಕಾರಿ ತಿಳಿಸಿದ್ದಾರೆ.
ಮೇ 19ರ ನಸುಕಿನಲ್ಲಿ ಇಲ್ಲಿನ ಕಲ್ಯಾಣ ನಗರ ಪ್ರದೇಶದಲ್ಲಿ 17 ವರ್ಷದ ಬಾಲಕನೊಬ್ಬ ಪೋಶೆ ಕಾರನ್ನು ಅತಿವೇಗದಿಂದ ಚಲಾಯಿಸುತ್ತಿದ್ದಾಗ ನಡೆದ ಅಪಘಾತದಲ್ಲಿ ಇಬ್ಬರು ಐಟಿ ಉದ್ಯೋಗಿಗಳು ಮೃತಪಟ್ಟಿದ್ದರು. ಅಪಘಾತ ನಡೆದ ಸಂದರ್ಭದಲ್ಲಿ, ಬಾಲಕ ಮದ್ಯಪಾನ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಅಪಘಾತ ನಡೆದ ಕೆಲವೇ ಗಂಟೆಗಳಲ್ಲಿ ಬಾಲನ್ಯಾಯ ಮಂಡಳಿಯು ಬಾಲಕನಿಗೆ ಜಾಮೀನು ನೀಡಿತ್ತು. ಅಲ್ಲದೇ, ರಸ್ತೆ ಅಪಘಾತಗಳ ಕುರಿತು 300 ಪದಗಳ ಪ್ರಬಂಧ ಬರೆಯುವಂತೆಯೂ ಸೂಚಿಸಿತ್ತು.