ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನಿನ ಜೊತೆ ಸಂಘರ್ಷಕ್ಕೆ ಸಿಲುಕಿರುವ ಬಾಲಕನ ತಾಯಿ ಶಿವಾನಿ ಅಗರ್ವಾಲ್ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಬಾಲಕನ ರಕ್ತದ ಮಾದರಿಯನ್ನು ಬದಲಿಸಿ, ಆತನ ತಾಯಿಯ ರಕ್ತದ ಮಾದರಿಯನ್ನು ಇರಿಸಲಾಗಿತ್ತು ಎಂಬುದು ಖಚಿತವಾದ ನಂತರ ಈ ಬಂಧನ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ನಿರೀಕ್ಷಣಾ ಗೃಹದಲ್ಲಿ ಇರುವ ಬಾಲಕನ ಜೊತೆ, ಆತನ ತಾಯಿಯ ಉಪಸ್ಥಿತಿಯಲ್ಲಿ, ಸರಿಸುಮಾರು ಒಂದು ಗಂಟೆ ಮಾತನಾಡಿದರು.
ಬಾಲಕನನ್ನು ವಿಚಾರಣೆಗೆ ಗುರಿಪಡಿಸಲು ಬಾಲನ್ಯಾಯ ಮಂಡಳಿಯು (ಜೆಜೆಬಿ) ಪೊಲೀಸರಿಗೆ ಅನುಮತಿ ನೀಡಿದೆ. ಬಾಲನ್ಯಾಯ ಕಾಯ್ದೆಯ ಪ್ರಕಾರ, ಕಾನೂನಿನ ಜೊತೆ ಸಂಘರ್ಷಕ್ಕೆ ಗುರಿಯಾದ ಮಕ್ಕಳ ವಿಚಾರಣೆಯನ್ನು ಅವರ ಪಾಲಕರ ಸಮ್ಮುಖದಲ್ಲಿ ನಡೆಸಬೇಕು.