ಚಂಡೀಗಡ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಎಫ್ಇಎಂಎ) ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪುತ್ರ ರಣಿಂದರ್ ಸಿಂಗ್ ಗುರುವಾರ ಜಾರಿ ನಿರ್ದೇಶನಾಲಯದ (ಇ.ಡಿ) ಮುಂದೆ ವಿಚಾರಣೆಗೆ ಹಾಜರಾದರು.
ವಿದೇಶದಲ್ಲಿ ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ರಣಿಂದರ್ ಸಿಂಗ್ ವಿರುದ್ಧ ಇ.ಡಿ. ಎಫ್ಇಎಂಎ ಅಡಿ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದಡಿ ವಿಚಾರಣೆಗೆ ಹಾಜರಾಗುವಂತೆ ಇಡಿ ರಣಿಂದರ್ ಸಿಂಗ್ಗೆಸಮನ್ಸ್ ಜಾರಿ ಮಾಡಿತ್ತು.
ಈ ಹಿಂದೆ ಅಕ್ಟೋಬರ್ 27 ಮತ್ತು ನವೆಂಬರ್ 6 ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸೂಚಿಸಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
2016ರಲ್ಲಿಯೂ ರಣಿಂದರ್ ಸಿಂಗ್ ಅವರನ್ನು ಇ.ಡಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸ್ವಿಟ್ಜರ್ಲೆಂಡ್ನಲ್ಲಿ ಹಣದ ವರ್ಗಾವಣೆ ಮತ್ತು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ತನ್ನ ಕಂಪನಿಯ ಅಂಗಸಂಸ್ಥೆ ಮತ್ತು ಟ್ರಸ್ಟ್ ರಚನೆಯ ಬಗ್ಗೆ ಪ್ರಶ್ನಿಸಿತ್ತು.
ವಿದೇಶದಲ್ಲಿ ಬಹಿರಂಗಪಡಿಸದ ಆಸ್ತಿ ಹೊಂದಿರುವ ಪ್ರಕರಣವನ್ನು ಮೊದಲು ಆದಾಯ ಇಲಾಖೆಯು ತನಿಖೆ ನಡೆಸಿತ್ತು. ಈ ವೇಳೆ ರಣಿಂದರ್ ಸಿಂಗ್ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದರು.