ನವದೆಹಲಿ: ‘ಮನೆ ಕಟ್ಟಿಸಿಕೊಡುವುದಾಗಿ ಮುಸ್ಲಿಂ ಲೀಗ್ ಸುಳ್ಳು ಆಶ್ವಾಸನೆ ನೀಡಿದೆ’ ಎಂದು ರೋಹಿತ್ ವೇಮುಲಾ ತಾಯಿ ರಾಧಿಕಾ ಮಾಡಿದ್ದಾರೆ ಎನ್ನಲಾದ ಆರೋಪ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
‘ಮೋದಿ ಸರ್ಕಾರದ ವಿರುದ್ಧ ಹೇಳಿಕೆ ನೀಡುವಂತೆ ವೇಮುಲಾ ತಾಯಿಯನ್ನು ಪ್ರಚೋದಿಸಲು ವಿರೋಧ ಪಕ್ಷಗಳು ಇಂತಹ ಸುಳ್ಳು ಭರವಸೆ, ಆಮಿಷ ಒಡ್ಡಿವೆ. ವಿರೋಧ ಪಕ್ಷಗಳ ಮುಖವಾಡ ಕಳಚಿಬಿದ್ದಿದೆ’ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.
‘ವಸತಿ ಸೌಲಭ್ಯ ಕಲ್ಪಿಸುವುದಾಗಿ ಬಡ ಕುಟುಂಬಕ್ಕೆ ಸುಳ್ಳು ಆಶ್ವಾಸನೆ ನೀಡಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ವಿರೋಧ ಪಕ್ಷಗಳು ಕ್ಷಮೆ ಕೋರಬೇಕು’ ಎಂದು ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಪ್ರಶ್ನಿಸಿದ್ದಾರೆ.
ಮುಸ್ಲಿಂ ಲೀಗ್ ವಿರುದ್ಧ ತಾವು ಮಾಡಿದ ಆರೋಪಗಳ ಕುರಿತಾದ ಸುದ್ದಿಗಳನ್ನು ರೋಹಿತ್ ವೇಮುಲಾ ತಾಯಿ ರಾಧಿಕಾ ಅಲ್ಲಗಳೆದಿದ್ದಾರೆ.