ಭಾರತ್ ಜೋಡೊ ನ್ಯಾಯ ಯಾತ್ರೆ ಸೇರಿದಂತೆ ಹಲವು ಭಾಷಣಗಳಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಹೆಸರು ಪ್ರಸ್ತಾಪಿಸಿ ಟೀಕಿಸಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ.
ನಟಿ ಐಶ್ವರ್ಯ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ತಮ್ಮನ್ನು ತಾವೇ ಅಧೋಗತಿಗೆ ದೂಡಿಕೊಂಡಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
‘ಭಾರತೀಯರಿಂದ ಸತತ ನಿರಾಕರಣೆಗೆ ಒಳಗಾಗಿ ಹತಾಶರಾಗಿರುವ ರಾಹುಲ್ ಗಾಂಧಿ ಅವರು ಇದೀಗ ದೇಶದ ಹೆಮ್ಮೆಯ ನಟಿ ಐಶ್ವರ್ಯಾ ರೈ ಅವರನ್ನು ಅವಮಾನಿಸುವ ಹೊಸ ಸಾಹಸಕ್ಕೆ ಇಳಿದಿದ್ದಾರೆ. ಶೂನ್ಯ ಸಾಧನೆಯ ನಾಲ್ಕನೇ ತಲೆಮಾರಿನ ರಾಜವಂಶಸ್ಥ ಇದೀಗ ಐಶ್ವರ್ಯ ರೈ ಅವರನ್ನು ನಿಂದಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಗಾಂಧಿ ಕುಟುಂಬಕ್ಕೆ ಹೋಲಿಸಿದರೆ ಐಶ್ವರ್ಯ ರೈ ದೇಶಕ್ಕೆ ಹೆಚ್ಚಿನ ಕೀರ್ತಿ ತಂದಿದ್ದಾರೆ’ ಎಂದು ಬಿಜೆಪಿ ಎಕ್ಸ್ನಲ್ಲಿ ಬರೆದುಕೊಂಡಿದೆ.
‘ಸಿದ್ದರಾಮಯ್ಯನವರೇ... ನಿಮ್ಮ ಬಾಸ್ ಕನ್ನಡಿಗರೊಬ್ಬರನ್ನು ಅಮಾನಿಸುವುದನ್ನು ಮುಂದುವರಿಸಿದರೆ, ನಿಮ್ಮ ಕನ್ನಡಾಭಿಮಾನವನ್ನು ಎತ್ತಿ ಹಿಡಿಯುತ್ತೀರಾ? ಅಥವಾ ಮುಖ್ಯಮಂತ್ರಿ ಕುರ್ಚಿಯನ್ನು ಕಾಪಾಡಲು ಮೌನವಾಗಿರುತ್ತೀರಾ?’ ಎಂದು ಕೇಳಿದೆ.
ನ್ಯಾಯ ಯಾತ್ರೆ ವೇಳೆ ಹೇಳಿದ್ದೇನು?
ಉತ್ತರ ಪ್ರದೇಶದಲ್ಲಿ ‘ಭಾರತ್ ಜೋಡೊ ನ್ಯಾಯ ಯಾತ್ರೆ’ ವೇಳೆ ರಾಮಮಂದಿರ ಉದ್ಘಾಟನೆ ಕುರಿತಂತೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ‘ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಐಶ್ವರ್ಯ ರೈನಂತಹ ಸೆಲೆಬ್ರೆಟಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಭಾಗವಹಿಸುತ್ತಾರೆ. ಆದರೆ ಶೇ.73ರಷ್ಟು ಜನಸಂಖ್ಯೆ ಹೊಂದಿರುವ ದಲಿತ ಬುಡಕಟ್ಟು ಸಮುದಾಯಗಳ ಯಾರೊಬ್ಬರು ಅಲ್ಲಿ ಕಾಣಸಿಗುವುದಿಲ್ಲ’ ಎಂದಿದ್ದರು.
ಇದಲ್ಲದೇ ತಮ್ಮ ಹಲವು ಭಾಷಣಗಳಲ್ಲಿಯೂ ಐಶ್ವರ್ಯ ಅವರ ಹೆಸರನ್ನು ರಾಹುಲ್ ಪ್ರಸ್ತಾಪಿಸಿದ್ದರು.
ರಾಮಮಂದಿರ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಮಗ ಅಭಿಷೇಕ್ ಭಾಗವಹಿಸಿದ್ದು, ಐಶ್ವರ್ಯಾ ರೈ ಭಾಗವಹಿಸಿರಲಿಲ್ಲ.
Congress Clown Prince @RahulGandhi now has a dangerous & creepy obsession with successful & self-made women.
— BJP Karnataka (@BJP4Karnataka) February 21, 2024
Frustrated by constant rejections by Indians, Rahul Gandhi has sunk to a new low of demeaning India's Pride Aishwarya Rai.
A fourth-generation dynast, with zero… pic.twitter.com/6TA442wWTZ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.