ಜೈಪುರ: ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ನ.25 ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲುವು ಸಾಧಿಸಿದರೆ, ‘ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅವಕಾಶ, ‘ಗೋಧನ್ ಸ್ಕೀಮ್’ ಅಡಿಯಲ್ಲಿ ಬೆರಣಿಯ ಬೆಲೆಯನ್ನು ಕೆ.ಜಿಗೆ ₹2 ನಿಗದಿಪಡಿಸಲಾಗುವುದು, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಖಚಿತಪಡಿಸಿಕೊಳ್ಳಲು ಕಾನೂನಿನ ಅಂಗೀಕಾರ, ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಮೊದಲ ವರ್ಷದಲ್ಲಿ ಟ್ಯಾಬ್ಲೆಟ್ ಅಥವಾ ಲ್ಯಾಪ್ಟಾಪ್ ನೀಡಲಾಗುವುದು, ಪ್ರಾಕೃತಿಕ ವಿಕೋಪದಿಂದಾದ ಹಾನಿಗೆ ₹15 ಲಕ್ಷ ವಿಮೆ ಸೌಲಭ್ಯ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಇವೆಲ್ಲದರ ಜತೆಗೆ ಇನ್ನೂ ಎರಡು ಗ್ಯಾರಂಟಿಗಳನ್ನು ಘೋಷಣೆ ಮಾಡಿದ ಅವರು, 1.05 ಕೋಟಿ ಕುಟುಂಬಗಳಿಗೆ ₹500ಕ್ಕೆ ಅಡುಗೆ ಸಿಲಿಂಡರ್ ಅನ್ನು ನೀಡಲಾಗುವುದು, ವಾರ್ಷಿಕವಾಗಿ ಕುಟುಂಬದ ಮಹಿಳಾ ಯಜಮಾನಿಗೆ ₹10,000 ಗೌರವಧನವನ್ನು ಕಂತುಗಳಾಗಿ ನೀಡಲಾಗುವುದು. ಇದನ್ನು ಪ್ರಿಯಾಂಕಾ ಗಾಧಿ ವಾದ್ರಾ ಅವರು ಈಗಾಗಲೇ ಜುಂಜುನುದಲ್ಲಿ ನಡೆಸಿದ ಸಾರ್ವಜನಿಕ ರ್ಯಾಲಿಯಲ್ಲಿ ಘೋಷಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಐದು ಭರವಸೆಗಳನ್ನು ಘೋಷಿಸುವ ವೇಳೆ ಕೇಂದ್ರ ಸರ್ಕಾರವು ಭದ್ರತಾ ಸಿಬ್ಬಂದಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಹೇಳಿಕೆಯ ಬಗ್ಗೆ ಗೆಹಲೋತ್ ವಾಗ್ದಾಳಿ ನಡೆಸಿದರು.
ಇದೇ ವೇಳೆ ನಮ್ಮ ಗ್ಯಾರಂಟಿ ಮಾದರಿಯನ್ನು ಪ್ರಧಾನಿ ಮೋದಿ ಅನುಸರಿಸುತ್ತಿದ್ದಾರೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.