21ರಂದೇ ಮೋದಿ ಅಯೋಧ್ಯೆಗೆ: ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ‘ಮುಖ್ಯ ಯಜಮಾನ’ರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭಕ್ಕೆ ಒಂದು ದಿನ ಬಾಕಿ ಇರುವಂತೆ ಭಾನುವಾರವೇ ಅಯೋಧ್ಯೆಯನ್ನು ತಲುಪಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರ ಮಧ್ಯಾಹ್ನ 12:30ರಿಂದ ಪ್ರಾಣ ಪ್ರತಿಷ್ಠಾಪನೆಯ ವಿಧಿಗಳು ಆರಂಭವಾಗಲಿವೆ. ಈಚಿನ ದಿನಗಳಲ್ಲಿ ನಸುಕಿನ ಜಾವ ದಟ್ಟ ಮಂಜು ಆವರಿಸುತ್ತಿದೆ. ಇದರಿಂದಾಗಿ ಮೋದಿ ಅವರ ವಿಮಾನವು ಸೋಮವಾರ ನಿಗದಿತ ಸಮಯದಲ್ಲಿ ಅಯೋಧ್ಯೆ ತಲುಪುವುದಕ್ಕೆ ಸಮಸ್ಯೆಯಾಗುವ ಸಂಭವ ಇರುವುದರಿಂದ ಅವರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಮೋದಿ ಅವರು ಸರಯೂ ನದಿಯಲ್ಲಿ ಪವಿತ್ರಸ್ನಾನ ಮಾಡಿ, ನದಿ ನೀರನ್ನು ಹತ್ತಿರದ ನಾಗೇಶ್ವರ ಮಹಾದೇವ ದೇವಾಲಯಕ್ಕೆ ತಂದು ಜಲಾಭಿಷೇಕ ಮಾಡುವ ಸಾಧ್ಯತೆ ಇದೆ. ಅವರು ಸೀತೆಯ ಕುಲದೇವಿ ‘ದೇವಕಲಿ’ ಮಂದಿರ ಮತ್ತು ಹನುಮಾನ್ ಗಡಿ ಮಂದಿರಕ್ಕೂ ಭೇಟಿ ನೀಡಬಹುದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂಲಗಳು ತಿಳಿಸಿವೆ.
ರಾಮಲಲ್ಲಾ ವಿಗ್ರಹಕ್ಕೆ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ಪ್ರಾಣ ಪ್ರತಿಷ್ಠಾಪನೆ ದಿನದಂದು ಮೋದಿ ಅವರ ಎದುರೇ ತೆರೆಯಲಾಗುತ್ತದೆ. ವಿಗ್ರಹದ ಕಣ್ಣಿಗೆ ಕಾಡಿಗೆಯನ್ನು ಮೋದಿ ಅವರೇ ಹಚ್ಚಿ, ಕನ್ನಡಿ ತೋರಲಿದ್ದಾರೆ ಮೂಲಗಳು ತಿಳಿಸಿವೆ.