ಮುಂಬೈ: ಮಹಾರಾಷ್ಟ್ರದಿಂದ ಸಂಗ್ರಹವಾದ ತೆರಿಗೆಯಲ್ಲಿ ಶೇ 50ರಷ್ಟನ್ನು ಕೇಂದ್ರ ಸರ್ಕಾರ ವಾಪಸ್ ಮಾಡಬೇಕು ಎಂದು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.
ಮುಂಬೈನಲ್ಲಿ ನಡೆದ ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಠಾಕ್ರೆ, ದಕ್ಷಿಣದ ಕರ್ನಾಟಕ ಮತ್ತು ಕೇರಳ ರಾಜ್ಯಗಳು ಇದೇ ರೀತಿಯ ಬೇಡಿಕೆಯೊಂದಿಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದನ್ನು ಉಲ್ಲೇಖಿಸಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಠಾಕ್ರೆ, ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ₹ 1 ಅನ್ನು ಪಾವತಿಸಿದರೆ, ಕೇವಲ 7 ಪೈಸೆಯಷ್ಟೇ ವಾಪಸ್ ಬರುತ್ತಿದೆ. 'ಉಳಿದ ಹಣ ಏನಾಗುತ್ತಿದೆ? ಯಾವ ಉಚಿತ ಯೋಜನೆಗಳನ್ನು ನೀಡಿದ್ದೀರಿ' ಎಂದು ಪ್ರಶ್ನಿಸಿದ್ದಾರೆ.
'ಮಹಾರಾಷ್ಟ್ರ ₹ 1 ಅನ್ನು ನೀಡುತ್ತಿದೆ ಎಂದರೆ, ರಾಜ್ಯದ ಅಭಿವೃದ್ಧಿಗಾಗಿ ಅದರಲ್ಲಿ ಅರ್ಧದಷ್ಟನ್ನು ವಾಪಸ್ ಮಾಡಿ. ನೀವು (ಕೇಂದ್ರ ಸರ್ಕಾರ) ನಮ್ಮ ರಾಜ್ಯವನ್ನು ಲೂಟಿ ಮಾಡುತ್ತಿದ್ದೀರಿ. ನಾವು (ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ) ಅಧಿಕಾರಕ್ಕೇರಿದರೆ, ಮಹಾರಾಷ್ಟ್ರದ ಪಾಲನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈಗಿನ ತೆರಿಗೆ ಹಂಚಿಕೆ ಸೂತ್ರವನ್ನು ಬದಲಿಸುವ ಭರವಸೆ ನೀಡುತ್ತೇನೆ' ಎಂದು ಹೇಳಿದ್ದಾರೆ.