ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮಾ ದಾಳಿ ಸರ್ಕಾರದ್ದೇ ಲೋಪ: ಕಾಶ್ಮೀರದ ಮಾಜಿ ರಾಜ್ಯಪಾಲ

Last Updated 15 ಏಪ್ರಿಲ್ 2023, 23:00 IST
ಅಕ್ಷರ ಗಾತ್ರ

ಬೆಂಗಳೂರು: ಪುಲ್ವಾಮಾ ದಾಳಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಸಿಆರ್‌‍ಪಿಎಫ್‌ ಅದಕ್ಷತೆಯೇ ಕಾರಣ. ಯೋಧರ ಪ್ರಯಾಣಕ್ಕೆ ವಿಮಾನವನ್ನು ಕೇಳಿದ್ದರೂ, ಗೃಹ ಸಚಿವಾಲಯ ನೀಡಿರಲಿಲ್ಲ. ಇದು ಸರ್ಕಾರದ್ದೇ ಲೋಪ. ಈ ಬಗ್ಗೆ ಏನೂ ಮಾತನಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನನಗೆ ತಾಕೀತು ಮಾಡಿದ್ದರು ಎಂದು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ರಾಜನಾಥ್‌ ಸಿಂಗ್ ಅವರು ಆಗ ಕೇಂದ್ರ ಗೃಹಸಚಿವರಾಗಿದ್ದರು.

‘ದಿ ವೈರ್‌’ ಪೋರ್ಟಲ್‌ಗಾಗಿ ಕರಣ್‌ ಥಾಪರ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಮಲಿಕ್‌ ಹೀಗೆ ಹೇಳಿದ್ದಾರೆ.

2019ರ ಫೆಬ್ರುವರಿಯಲ್ಲಿ ಜಮ್ಮ-ಕಾಶ್ಮೀರದ ಪುಲ್ವಾಮಾ ಬಳಿ ಸಾಗುತ್ತಿದ್ದ ಸಿಆರ್‌‍ಪಿಎಫ್‌ ಯೋಧರ ಮೇಲೆ ಉಗ್ರರು ದಾಳಿ ನಡೆಸಿ
ದ್ದರು. ದಾಳಿಯಲ್ಲಿ 40 ಯೋಧರು ಹತರಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಈ ದಾಳಿಯು ಚರ್ಚೆಯ ದೊಡ್ಡ ವಿಷಯವಾ
ಗಿತ್ತು. ಪುಲ್ವಾಮಾ ದಾಳಿ ಮತ್ತು ಜಮ್ಮು–ಕಾಶ್ಮೀರದ ವಿಶೇಷ ಸ್ಥಾನ ರದ್ದತಿ ಸಂದರ್ಭದಲ್ಲಿ ಮಲಿಕ್ ಅವರು ಆ ರಾಜ್ಯದ ರಾಜ್ಯಪಾಲರಾಗಿ ಇದ್ದರು.

ಸಿಆರ್‌ಪಿಎಫ್‌ ಯೋಧರು ‍‍ಪ್ರಯಾಣಿಸಬೇಕಿದ್ದ ಮಾರ್ಗದ ಸುರಕ್ಷತೆಯ ತಪಾಸಣೆಯೂ ಸಮರ್ಪಕವಾಗಿ ನಡೆದಿರಲಿಲ್ಲ ಎಂಬುದನ್ನು ಮಲಿಕ್‌ ಅವರು ಎಳೆ ಎಳೆಯಾಗಿ ವಿವರಿಸಿದ್ದಾರೆ.

‘ಪುಲ್ವಾಮಾ ದಾಳಿಯು ದೇಶದಲ್ಲಿಯೇ ಅತ್ಯಂತ ದುರಂತಮಯ ಅವಘಡವಾಗಿದೆ. ನಮ್ಮ ಅಸಮರ್ಥತೆಯ ಕಾರಣಕ್ಕೆ 40 ಯೋಧರು ಪ್ರಾಣ ಕಳೆದುಕೊಂಡರು’ ಎಂದು ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

‘ಭ್ರಷ್ಟಾಚಾರದ ಕುರಿತು ಮೋದಿ ತಲೆಕೆಡಿಸಿಕೊಳ್ಳುವುದಿಲ್ಲ’

ಭ್ರಷ್ಟಾಚಾರದ ಕುರಿತು ಮೋದಿ ಅವರು ತಲೆಯೇ ಕೆಡಿಸಿಕೊಂಡಿಲ್ಲ. ಭ್ರಷ್ಟಾಚಾರದ ಹಲವು ಪ್ರಕರಣಗಳನ್ನು ಮೋದಿ ಅವರ ಗಮನಕ್ಕೆ ಪದೇ ಪದೇ ತಂದ ಕಾರಣಕ್ಕಾಗಿಯೇ ತಮ್ಮನ್ನು ಗೋವಾ ರಾಜ್ಯಪಾಲ ಹುದ್ದೆಯಿಂದ ಮೇಘಾಲಯಕ್ಕೆ 2020ರ ಆಗಸ್ಟ್‌ನಲ್ಲಿ ಕಳುಹಿಸಲಾಯಿತು. ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸುವುದರ ಬದಲಿಗೆ ನಿರ್ಲಕ್ಷಿಸಲು ಸರ್ಕಾರ ನಿರ್ಧರಿಸಿತು. ಪ್ರಧಾನಿಯ ಸುತ್ತಲೂ ಇರುವ ಜನರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರು ಪ್ರಧಾನಿ ಕಚೇರಿಯ ಹೆಸರನ್ನೂ ಬಳಸಿಕೊಳ್ಳುತ್ತಿದ್ದಾರೆ. ಇವೆಲ್ಲವನ್ನೂ ಮೋದಿ ಅವರ ಗಮನಕ್ಕೆ ತಂದರೂ ಅವರು ಅದರ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಮಲಿಕ್‌ ವಿವರಿಸಿದ್ದಾರೆ.

ಮಲಿಕ್‌ ಹೇಳಿದ್ದೇನು?

*ಪ್ರಧಾನಿಯು ಬಿಬಿಸಿ ಪ್ರಕರಣವನ್ನು ನಿರ್ವಹಿಸಿದ ರೀತಿ ಅತ್ಯಂತ ಕೆಟ್ಟದಾಗಿತ್ತು

*ಅದಾನಿ ಪ್ರಕರಣವು ಪ್ರಧಾನಿ ವರ್ಚಸ್ಸಿಗೆ ಗಂಭೀರವಾದ ಹಾನಿ ಉಂಟು ಮಾಡಿದೆ. ಈ ಪ್ರಕರಣವು ಗ್ರಾಮಗಳ ಮಟ್ಟದಲ್ಲಿಯೂ ಚರ್ಚೆ ಆಗುತ್ತಿದೆ. ಮುಂದಿನ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಒಟ್ಟಾಗಿ ಬಿಜೆಪಿಯ ವಿರುದ್ಧ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೆ ಬಿಜೆಪಿಗೆ ಅದು ಪ್ರತಿಕೂಲ ಆಗಲಿದೆ

*ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕೊಡದೇ ಇದ್ದದ್ದು ಹಿಂದೆಂದೂ ಆಗಿರದಂತಹ ತಪ್ಪು. ಅದಾನಿ ಪ್ರಕರಣದಲ್ಲಿ ರಾಹುಲ್ ಅವರು ಸರಿಯಾದ ಪ್ರಶ್ನೆಗಳನ್ನೇ ಕೇಳುತ್ತಿದ್ದಾರೆ. ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರ ಕೊಡುವುದು ಸಾಧ್ಯವಿಲ್ಲ

ವಿಮಾನ ಏಕೆ ಕೊಟ್ಟಿಲ್ಲ: ಕಾಂಗ್ರೆಸ್‌ ಪ್ರಶ್ಮೆ

ಸಿಆರ್‌ಪಿಎಫ್‌ ಸಿಬ್ಬಂದಿಯು ರಸ್ತೆ ಮಾರ್ಗದಲ್ಲಿ ಸಂಚರಿಸಿದರೆ ಉಗ್ರರ ದಾಳಿಯ ಅಪಾಯ ಇದ್ದರೂ ವಿಮಾನದ ವ್ಯವಸ್ಥೆ ಏಕೆ ಮಾಡಿಲ್ಲ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಪುಲ್ವಾಮಾ ದಾಳಿಯ ಕುರಿತ ತನಿಖೆಯ ಫಲಿತಾಂಶ ಏನಾಗಿದೆ ಎಂದೂ ಕೇಳಿದೆ.

ಸತ್ಯಪಾಲ್‌ ಮಲಿಕ್‌ ಅವರು ಮಾಡಿರುವ ಆರೋಪಗಳ ಕುರಿತು ಸರ್ಕಾರ ಪ್ರತಿಕ್ರಿಯೆ ನೀಡಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ‘ಕನಿಷ್ಠ ಆಳ್ವಿಕೆ, ಗರಿಷ್ಠ ಮೌನ’ ಎಂದು ಅವರು ಬಣ್ಣಿಸಿದ್ದಾರೆ.

‘ಜೈಷ್‌ ಎ ಮೊಹಮ್ಮದ್‌ ಉಗ್ರರಿಂದ ಇದ್ದ ಬೆದರಿಕೆಯನ್ನು ನಿರ್ಲಕ್ಷಿಸಿದ್ದು ಏಕೆ? 2019ರ ಜನವರಿ 2ರಿಂದ 2019ರ ಫೆಬ್ರುವರಿ 13ರ ನಡುವೆ ಗುಪ್ತಚರ ವಿಭಾಗದಿಂದ 11 ಮಾಹಿತಿಗಳು ಬಂದಿದ್ದವು. ಅವುಗಳನ್ನು ನಿರ್ಲಕ್ಷಿಸಿದ್ದು ಏಕೆ? ಉಗ್ರರಿಗೆ 300 ಕಿಲೋ ಆರ್‌ಡಿಎಕ್ಸ್‌ ಸಿಕ್ಕಿದ್ದು ಹೇಗೆ’ ಎಂದು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನಾತೆ ಪ್ರಶ್ನಿಸಿದ್ದಾರೆ.

‘ಪುಲ್ವಾಮಾ ದಾಳಿಯಾಗಿ ನಾಲ್ಕು ವರ್ಷಗಳಾದವು. ತನಿಖೆ ಎಲ್ಲಿಗೆ ಬಂದಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡಭಾಲ್‌ ಮತ್ತು ಆಗಿನ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಮೇಲೆ ಯಾವಾಗ ಹೇಗೆ ಉತ್ತರದಾಯಿತ್ವ ಹೊರಿಸುವಿರಿ’ ಎಂದು ಅವರು ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT