ನವದೆಹಲಿ: ಡಿಸೆಂಬರ್ 13ರಿಂದ ಮೇಘಾಲಯದ ಕಲ್ಲಿದ್ದಲು ಗಣಿಯೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೋರಿರುವ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿ ಎಸ್.ಕೆ. ಕೌಲ್ ನೇತೃತ್ವದ ಪೀಠದ ಎದುರು ಗುರುವಾರ ಅರ್ಜಿ ವಿಚಾರಣೆಗೆ ಬರಲಿದೆ.
ನಿರ್ದಿಷ್ಟ ಮಾನದಂಡದ ಅನುಸಾರ ಕಾರ್ಯಾಚರಣೆ ನಡೆಸುವಂತೆ ಕಾರ್ಯಾಚರಣೆ ನಿರತ ತಂಡಗಳು ಹಾಗೂ ಸರ್ಕಾರಕ್ಕೆ ಸೂಚಿಸಬೇಕು ಎಂದು ಅರ್ಜಿದಾರ ಆದಿತ್ಯ ಎನ್.ಪ್ರಸಾದ್ ಅವರು ಆಗ್ರಹಿಸಿದ್ದಾರೆ.
ಗಣಿ ಕಾರ್ಮಿಗರು ಮೃತಪಟ್ಟಿರುವ ವಾಸನೆ ಬರುತ್ತಿದೆ ಎಂಬುದಾಗಿ ಮಾಧ್ಯಮಗಳು ಮಾಡಿರುವ ವರದಿಯನ್ನು ಎನ್ಡಿಆರ್ಎಫ್ ಅಲ್ಲಗಳೆದಿದೆ. ನೀರು ನಿಂತಿರುವ ಕಾರಣ ವಾಸನೆ ಬಂದಿರಬಹುದು ಎಂದು ಅಭಿಪ್ರಾಯಪಟ್ಟಿದೆ.
ಗಣಿಯಿಂದ ಹೊರಬರಲು ನೌಕರರಿಗೆ ಯಾವುದೇ ದಾರಿಗಳು ಇಲ್ಲ ಎಂದು ಗಣಿ ಕಾರ್ಮಿಕನೊಬ್ಬ ತಿಳಿಸಿದ್ದಾನೆ.
ತಮ್ಮವರನ್ನು ಜೀವಂತವಾಗಿ ಕರೆತನ್ನಿ ಅಥವಾ ಕಡೇಪಕ್ಷ ಮೃತದೇಹಗಳನ್ನಾದರೂ ತೆಗೆಯಿರಿ ಎಂದು ಕಾರ್ಮಿಕರ ಕುಟುಂಬದವರು ಸರ್ಕಾರಕ್ಕೆ ಕೇಳಿಕೊಂಡಿದ್ದಾರೆ.