ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಷರತ್‌ ಕ್ಷಮೆ ಯಾಚಿಸಲು ಲಲಿತ್‌ ಮೋದಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ಟ್ವಿಟರ್‌ನಲ್ಲಿ ನ್ಯಾಯಾಂಗ ನಿಂದಿಸುವಂಥ ಹೇಳಿಕೆ ಕುರಿತ ಪ್ರಕರಣ
Last Updated 13 ಏಪ್ರಿಲ್ 2023, 15:43 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಾಂಗವನ್ನು ನಿಂದಿಸುವಂಥ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಅವರಿಗೆ ಬೇಷರತ್‌ ಕ್ಷಮೆಯಾಚಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ.

ಲಲಿತ್‌ ಅವರು ಮಾರ್ಚ್‌ 30ರಂದು ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತೆ ಟ್ವೀಟ್‌ ಮಾಡಿದ್ದರು. ಅದನ್ನು ಪ್ರಶ್ನಿಸಿ ಹಿರಿಯ ವಕೀಲ ಸಿ.ಯು. ಸಿಂಗ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಸಿ.ಟಿ. ರವಿಕುಮಾರ್‌ ಅವರಿದ್ದ ಪೀಠವು ಲಲಿತ್‌ ಮೋದಿ ಅವರ ವಿರುದ್ಧ ಹರಿಹಾಯ್ದಿತು. ಸಾಮಾಜಿಕ ಜಾಲತಾಣಗಳು ಮತ್ತು ದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತ್ತ, ಚೆನ್ನೈ ನಗರಗಳಲ್ಲಿ ಆವೃತ್ತಿ ಹೊಂದಿರುವ ರಾಷ್ಟ್ರಮಟ್ಟದ ಸುದ್ದಿಪತ್ರಿಕೆಗಳಲ್ಲಿ ಬೇಷರತ್‌ ಕ್ಷಮೆ ಕೋರುವಂತೆ ಅವರಿಗೆ ನಿರ್ದೇಶಿಸಿತು.

‘ಕಾನೂನು ಮತ್ತು ದೇಶದ ಸಾಂಸ್ಥಿಕ ವ್ಯವಸ್ಥೆಗಿಂತ ಲಲಿತ್‌ ದೊಡ್ಡವರಲ್ಲ. ದುಡ್ಡಿನಿಂದ ಯಾರನ್ನಾದರೂ ಕೊಂಡುಕೊಳ್ಳಬಹುದು ಎಂಬ ಭ್ರಮೆ ಅವರಿಗೆ ಇದ್ದಂತಿದೆ’ ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.

‘ಲಲಿತ್‌ ಸಲ್ಲಿಸಿರುವ ಪ್ರಮಾಣಪತ್ರದ ಕುರಿತು ತಮಗೆ ತೃಪ್ತಿಯಿಲ್ಲ. ಅವರು ನೀಡಿರುವ ಸ್ಪಷ್ಟೀಕರಣವೂ ನ್ಯಾಯಾಂಗದ ಘನತೆಗೆ ಚ್ಯುತಿ ತರುವಂತಿದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ಕ್ಷಮೆ ಕೋರಿ ಸುಪ್ರೀಂ ಕೋರ್ಟ್‌ಗೆ ಪುನಃ ಅಫಿಡವಿಟ್‌ ಸಲ್ಲಿಸುವಂತೆ ಮತ್ತು ಭವಿಷ್ಯದಲ್ಲಿ ಭಾರತೀಯ ನ್ಯಾಯಾಂಗದ ಘನತೆಗೆ ಚ್ಯುತಿ ತರುವಂತಹ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಅದರಲ್ಲಿ ನಮೂದಿಸುವಂತೆ ಪೀಠ ಸೂಚಿಸಿತು.

ಲಲಿತ್‌ ಅವರು ಕ್ಷಮೆ ಕೋರಿ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವುದು ಕೇವಲ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಎಂದು ಸಿ.ಯು. ಸಿಂಗ್‌ ಪರ ವಕೀಲ ರಂಜಿತ್‌ ಕುಮಾರ್‌ ಅವರು ಪೀಠದೆದುರು ಹೇಳಿದರು.

ಲಲಿತ್‌ ಟ್ವಿಟರ್‌ ಪೋಸ್ಟ್‌ ವಿರುದ್ದ ಹರಿಹಾಯ್ದ ಪೀಠ, ನ್ಯಾಯಾಧೀಶರು ಕೆಲವರ ಕಿಸೆಯಲ್ಲಿದ್ದಾರೆ ಎಂದು ಲಲಿತ್‌ ಹೇಳಿರುವುದರ ಅರ್ಥವೇನು. ದೇಶದಲ್ಲಿ ನ್ಯಾಯಾಂಗ ದುರ್ಬಲವಾಗಿದೆ ಎಂದು ಅವರು ಭಾವಿಸಿದ್ದಾರಾ ಎಂದು ಪ್ರಶ್ನಿಸಿತು.

ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್‌ 24ಕ್ಕೆ ಕೋರ್ಟ್‌ ನಿಗದಿಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT