ನವದೆಹಲಿ: ಬೇರ್ಪಡಲು ಪತಿ ಮತ್ತು ಪತ್ನಿಯ ಒಪ್ಪಿಗೆ ಇದ್ದಾಗ, ಪ್ರಕರಣವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಒಪ್ಪಿಸದೇ ಅವರ ಮದುವೆಯನ್ನು ರದ್ದುಮಾಡುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮೇ 1ರಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಸಂಜೀವ್ ಖನ್ನಾ, ಎ.ಎಸ್.ಓಕಾ, ವಿಕ್ರಮನಾಥ್ ಹಾಗೂ ಜೆ.ಕೆ.ಮಾಹೇಶ್ವರಿ ಅವರಿರುವ ಸಂವಿಧಾನ ನ್ಯಾಯಪೀಠ, ಕಳೆದ ವರ್ಷ ಸೆಪ್ಟೆಂಬರ್ 29ರಂದು ತೀರ್ಪನ್ನು ಕಾಯ್ದಿರಿಸಿತ್ತು.
‘ಕೆಲ ಸಾಮಾಜಿಕ ಬದಲಾವಣೆಗಳಿಗೆ ಸಮಯ ಬೇಕಾಗುತ್ತದೆ. ಕೆಲವೊಮ್ಮೆ ಕಾನೂನು ರಚಿಸುವುದು ಸುಲಭವಾದರೂ, ಬದಲಾವಣೆಗಳೊಂದಿಗೆ ಹೆಜ್ಜೆ ಹಾಕುವಂತೆ ಸಮಾಜದ ಮನವೊಲಿಕೆ ಕಷ್ಟ’ ಎಂದು ನ್ಯಾಯಪೀಠ ಆಗ ಹೇಳಿತ್ತು.